ಶಾಸಕರಿಂದ ಪ್ರಚೋದನಕಾರಿ ಹೇಳಿಕೆ – ಹಿಂಜಾವೆಯಿಂದ ದೂರು

0

ಪುತ್ತೂರು: ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರು ಹಿಂದು ಸಂಘಟನೆಗಳ ಪ್ರಮುಖರನ್ನು ಉದ್ದೇಶಿಸಿ ಸಾರ್ವಜನಿಕವಾಗಿ ನಿಂದಿಸಿ, ಅವಮಾನಕರ ರೀತಿಯಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆಯನ್ನು ನೀಡಿದ್ದಾರೆಂದು ಆರೋಪಿಸಿ ಹಿಂದು ಜಾಗರಣ ವೇದಿಕೆಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ದ.ಕ. ಜಿಲ್ಲೆಯಲ್ಲಿ ನೂತನ ಎಸ್ಪಿಯವರು ಮತ್ತು ಕಮಿಷನರ್ ಅವರು ಅಧಿಕಾರ ವಹಿಸಿಕೊಂಡ ನಂತರ ಎಲ್ಲವೂ ಶಾಂತಿಯುತವಾಗಿ ಸಾರ್ವಜನಿಕ ವಲಯದಲ್ಲಿ ಭಯಮುಕ್ತವಾಗಿತ್ತು. ಇದೆಲ್ಲದರ ಮಧ್ಯೆ ಪುತ್ತೂರು ತಾಲೂಕಿನ ಶಾಸಕ ಅಶೋಕ್ ಕುಮಾರ್ ರೈಯವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಹೊಸ ಎಸ್ಪಿಯವರು ಮತ್ತು ಕಮಿಷನರ್ ಬಂದ ನಂತರ ಪರಿವಾರ ಸಂಘಟನೆಗಳು ಪ್ರಮುಖರನ್ನು ಪೋಲಿಸ್ ಇಲಾಖೆ ಬೆತ್ತಲೆ ಮಾಡಿ ಚಡ್ಡಿಯಲ್ಲಿ ನಿಲ್ಲಿಸಿ ಫೋಟೋವನ್ನು ತೆಗೆದುಕೊಂಡು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಪ್ಲೇಟು ಕೊಟ್ಟು ಕೂರಿಸುತ್ತಾರೆ ಎಂದು ಉಪ್ಪಿನಂಗಡಿಯ ೩೪ ನೆಕ್ಕಿಲಾಡಿ ಎಂಬಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹಳ ಅವಮಾನಕರ ರೀತಿಯಲ್ಲಿ ಲೇವಡಿ ಮಾಡಿರುತ್ತಾರೆ.

ದಿನಾಂಕ ೦೭.೦೭.೨೦೨೫ನೇ ಸೋಮವಾರ ಹಿಂದು ಜಾಗರಣ ವೇದಿಕೆ ಪುತ್ತೂರು ವತಿಯಿಂದ ನಡೆದ ರಾಜ್ಯ ಸರಕಾರದ ಹಿಂದು ವಿರೋಧಿ ನೀತಿಯನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಪ್ರಮುಖ ಭಾಷಣಕಾರರಾಗಿ ಆಗಮಿಸಿದ ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಜಿತ್ ಮಡಿಕೇರಿ ಅವರ ಭಾಷಣದ ಕುರಿತು ಸುಳ್ಯ ತಾಲೂಕಿನ ನಗರದಲ್ಲಿ ಇರುವ ಸದರ್ನ್ ರೆಸಿಡೆನ್ಸಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಂಥಾಹ್ವಾನ ನೀಡುವಂತೆ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿರುತ್ತಾರೆ.

ಹಿಂದು ಸಂಘಟನೆಗಳ ಬಗ್ಗೆ ಕೀಳು ಮಟ್ಟದ ಪದ ಬಳಸಿ ಸಾರ್ವಜನಿಕವಾಗಿ ಅಶಾಂತಿಯನ್ನುಂಟು ಮಾಡುವ ಉದ್ದೇಶದಿಂದ ಈ ಹೇಳಿಕೆಯನ್ನು ನೀಡಿರುತ್ತಾರೆ. ಆದ್ದರಿಂದ ಇವರ ಮೇಲೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರಗಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮನವಿ ಸಂದರ್ಭ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಸಂಯೋಜಕರು ಮೋಹನ್ ದಾಸ್ ಕಾಣಿಯೂರು, ಪ್ರಾಂತ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಕಡಬ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅನೂಪ್ ಆಳ್ವ ಎಣ್ಮೂರು, ಜಿಲ್ಲಾ ಸಂಯೋಜಕ ಭರತ್ ಈಶ್ವರಮಂಗಲ, ಸಹ ಸಂಯೋಜಕ ದಿನೇಶ್ ಪಂಜಿಗ, ತಾಲೂಕು ಸಂಯೋಜಕ ಶಿವಪ್ರಸಾದ್ ಶಾಂತಿಗೋಡು, ತಾಲೂಕು ಕಾರ್ಯಕಾರಿಣಿ ಸದಸ್ಯ ಲತೇಶ್ ಕೆಮ್ಮಾಯಿ, ತಾಲೂಕು ಸಹ ಸಂಚಾಲಕ ಸಂತೋಷ್ ಮುಂಡೂರು, ರಘುನಾಥ್ ಕಡಬ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here