ಕಾರ್ಗಿಲ್ ಯೋಧರಿಗೆ ಸ್ಮರಣಿಕೆ ನೀಡುವ ಮೂಲಕ ಅರ್ಥಪೂರ್ಣ ವಿಜಯೋತ್ಸವ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ ಸಂಘ ಈ ಬಾರಿಯ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಮಾದರಿ ಕಾರ್ಯವೊಂದನ್ನು ನಡೆಸಿ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಅಂಬಿಕಾ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿವೆ. ಭಾರತೀಯ ಸೇನೆ, ಯೋಧರ ಸಾಹಸಗಾಥೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿವೆ. ಇದರಿಂದ ಪ್ರೇರೇಪಣೆಗೊಂಡ ವಿದ್ಯಾರ್ಥಿ ಸಂಘ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳ ಸ್ವಯಂಪ್ರೇರಿತ ಧನಸಹಾಯವನ್ನು ಪಡೆದು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಮೂವರು ವೀರ ಯೋಧರಿಗೆ ಸ್ಮರಣಿಕೆಗಳನ್ನು ಕಳುಹಿಸಿಕೊಟ್ಟಿದೆ. ಜತೆಗೆ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಬೆಂಗಳುರಿನ ಮಿಲಿಟರಿ ಬೆಟಾಲಿಯನ್ ಒಂದಕ್ಕೂ ಸ್ಮರಣಿಕೆಯನ್ನು ಕಳುಹಿಸಿಕೊಡಲಾಗಿದೆ.

ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ಅಪ್ರತಿಮ ಶೌರ್ಯ ಮೆರೆದು ಭಾರತೀಯ ಸೇನೆ ಕೊಡಮಾಡುವ ಅತ್ಯುಚ್ಚ ಗೌರವವಾದ ಪರಮವೀರ ಚಕ್ರ ಪುರಸ್ಕಾರ ಪಡೆದ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಅದೇ ಯುದ್ಧದಲ್ಲಿ ಭಾಗಿಯಾಗಿ ಸೇನಾ ಪದಕ ಪಡೆದ ಕ್ಯಾಪ್ಟನ್ ನವೀನ್ ನಾಗಪ್ಪ ಹಾಗೂ ಯುದ್ಧದಲ್ಲಿ ಭಾಗಿಯಾದ ಮತ್ತೋರ್ವ ಯೋಧ ಕಮಾಂಡರ್ ಶ್ಯಾಮರಾಜ್ ಇ.ವಿ. ಅವರಿಗೆ ಹಾಗೂ ಬೆಂಗಳೂರು ಬೆಟಾಲಯನ್ಗೆ ಈ ಸ್ಮರಣಿಕೆಗಳ್ನು ಕಳುಹಿಸಿಕೊಡಲಾಗಿದೆ.
ಜತೆಗೆ, ಸದ್ಯದಲ್ಲೇ ರಕ್ಷಾಬಂಧನ ದಿನವೂ ನಡೆಯಲಿರುವ ಹಿನ್ನೆಲೆಯಲ್ಲಿ ಸ್ಮರಣಿಕೆ ಜತೆಗೆ ರಕ್ಷೆಯನ್ನೂ ಜತೆಗಿರಿಸಿ ಹಾರೈಸಲಾಗಿದೆ.