ಕೆದಂಬಾಡಿ ಎಂಆರ್‌ಎಫ್ ಘಟಕಕ್ಕೆ ಎಂಎಲ್‌ಸಿ ಕಿಶೋರ್ ಕುಮಾರ್ ಭೇಟಿ, ಪರಿಶೀಲನೆ

0

ತ್ಯಾಜ್ಯ ಸಂಗ್ರಹಣಾ ವಾಹನ, ನಿರಂತರ ವಿದ್ಯುತ್ ಪೂರೈಕೆ, ಸಮಸ್ಯೆಗಳ ಪರಿಹರಿಸಲು ಶೀಘ್ರದಲ್ಲೇ ಕ್ರಮ, ಭರವಸೆ

ಪುತ್ತೂರು: ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯ 68 ಗ್ರಾಮ ಪಂಚಾಯತಿಗಳಿಂದ ಒಣ ಕಸವನ್ನು ಸಂಗ್ರಹಿಸುತ್ತಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರವು (ಎಂಆರ್‌ಎಫ್ ಘಟಕ) ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳೋಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿಗೆ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರುರವರು ಆ.6ರಂದು ಪರಿಶೀಲನಾ ಮತ್ತು ಅಧ್ಯಯನ ಭೇಟಿ ನೀಡಿದರು.

ಗ್ರಾಮ ಪಂಚಾಯತಿಗಳಿಂದ ನಿರಂತರವಾಗಿ ಒಣ ಕಸ ಸಂಗ್ರಹಣೆ ಆಗದಿರುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸುವ ಹಾಗೂ ಘಟಕದ ಕಾರ್ಯವೈಖರಿಯನ್ನು ಅಧ್ಯಯನ ಮಾಡುವ ಉದ್ದೇಶದಿಂದ ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರುರವರು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಘಟಕಕ್ಕೆ ಅಗತ್ಯವಿರುವ ತ್ಯಾಜ್ಯ ಸಂಗ್ರಹಣಾ ವಾಹನ ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ “ಸ್ವಚ್ಛ ಭಾರತ್” ಅಭಿಯಾನದ ದೃಷ್ಟಿಕೋನ ಕೇವಲ ಶೌಚಾಲಯ ನಿರ್ಮಾಣಕ್ಕೆ ಮಾತ್ರ ಸೀಮಿತವಲ್ಲ, ಅದು ಸ್ವಚ್ಛತೆ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯದ ಹಿತಚಿಂತನೆಯ ದೊಡ್ಡ ದೃಷ್ಟಿಕೋನವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಸಮುದಾಯದ ಒಳಗೆ ಜವಾಬ್ದಾರಿ, ಜಾಗೃತಿ ಹಾಗೂ ಸ್ಥಳೀಯ ಆಡಳಿತದೊಂದಿಗೆ ನಿಕಟ ಸಹಕಾರವನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮಿ ಬಲ್ಲಾಳ್ ಕೆದಂಬಾಡಿಬೀಡು, ಸದಸ್ಯರುಗಳಾದ ರತನ್ ರೈ ಕುಂಬ್ರ ಹಾಗೂ ಕೃಷ್ಣ ಕುಮಾರ್ ಇದ್ಯಪೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ, ಪಂಚಾಯತ್ ಸಿಬ್ಬಂದಿಗಳು, ಕೆದಂಬಾಡಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಶರತ್ ಗುತ್ತು ಹಾಗೂ ಘಟಕದ ವ್ಯವಸ್ಥಾಪಕ ಪ್ರಶಾಂತ್, ಎಂಎಲ್‌ಸಿ ಆಪ್ತ ಕಾರ್ಯದರ್ಶಿ ಅವಿನಾಶ್ ಬಿ.ಆರ್ ಉಪಸ್ಥಿತರಿದ್ದರು. ಘಟಕದ ಪ್ರಸ್ತುತ ಕಾರ್ಯಚರಣೆ, ತಾಂತ್ರಿಕ ಸವಾಲುಗಳು ಹಾಗೂ ನಿರ್ವಹಣಾ ತೊಂದರೆಗಳ ಕುರಿತು ಎಂಎಲ್‌ಸಿಯವರಿಗೆ ವಿವರ ನೀಡಲಾಯಿತು.

LEAVE A REPLY

Please enter your comment!
Please enter your name here