ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್.ಎಸ್.ಎಸ್) ವಿರುದ್ಧ ಅಪಪ್ರಚಾರ ನಡೆಸಿರುವ ಕುರಿತು ಎಂ.ಎಲ್.ಸಿ ಕಿಶೋರ್ ಕುಮಾರ್ ಗೃಹ ಇಲಾಖೆಯ ಗಮನ ಸೆಳೆದರು.
ಕೆಲವು ರಾಜಕೀಯ ವ್ಯಕ್ತಿಗಳು ಮತ್ತು ಸಂಘಟನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಸುಳ್ಳು ಮಾಹಿತಿ ಹರಡುತ್ತಿರುವ ಬಗ್ಗೆ ಲೇಖನ ಪ್ರಕಟಗೊಂಡಿದ್ದು, ಇದರ ಕುರಿತು ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಿಶೋರ್ ಕುಮಾರ್ ಅವರು ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು.
ಕಿಶೋರ್ ಕುಮಾರ್ ಅವರು ತಮ್ಮ ಪ್ರಸ್ತಾಪದಲ್ಲಿ, ಸಂಘ ಮತ್ತು ಸ್ವಾತಂತ್ರ್ಯ ಹೋರಾಟಗಾರರ ನಡುವಿನ ಬಾಂಧವ್ಯಕ್ಕೆ ಅನೇಕ ಐತಿಹಾಸಿಕ ಸಾಕ್ಷಿಗಳಿವೆ ಎಂದು ನೆನಪಿಸಿದರು. ಸಂಘವನ್ನು ಹೆಡಗೇವಾರ್ ಅವರು ಸ್ಥಾಪಿಸಿದ ನಂತರ ಕೇವಲ 15 ವರ್ಷಗಳಲ್ಲಿ ಬಲಿಷ್ಠ ಸಂಘಟನೆಯಾಗಿ ರೂಪುಗೊಂಡಿತು. 1928ರ ಸೈಮನ್ ಕಮಿಷನ್ ವಿರುದ್ಧ ನಾಗ್ಪುರದಲ್ಲಿ ನಡೆದ ಹರತಾಳದಲ್ಲಿ ಸ್ವಯಂಸೇವಕರು ಮುಂಚೂಣಿಯಲ್ಲಿದ್ದರು. ಭಗತ್ ಸಿಂಗ್, ರಾಜ್ ಗುರು, ಮದನ್ ಮಾಳವಿಯ ಸಂಘದ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವಲ್ಲಿ ಎಂ.ಎಸ್. ಗೋಳ್ವಾಕರ್ ಪ್ರಮುಖ ಪಾತ್ರ ವಹಿಸಿದ್ದರು.
ಹೈದರಾಬಾದ್ ವಿಲೀನ, ಗೋವಾ ಹಾಗೂ ದಾದರ್-ನಗರ್ ಹವೇಲಿ ಭಾಗಗಳನ್ನು ಭಾರತಕ್ಕೆ ಸೇರಿಸಲು ಸಂಘದ ಶ್ರಮ ಅಪಾರವಾಗಿದೆ. ಇಂತಹ ಸಂಘಟನೆಯ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿರುವುದು ವಿಷಾದನೀಯ. ಗೃಹ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದರು.
ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕರು, “ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದ್ದು, ಸದನದಲ್ಲಿ ನಂತರ ಉತ್ತರಿಸುವುದಾಗಿ” ಹೇಳಿದರು.