ಪುತ್ತೂರು:ನ್ಯಾಯಾಲಯದಲ್ಲಿ ದಾಖಲಾಗಿರುವ ಮತ್ತು ನ್ಯಾಯಾಲಯಕ್ಕೆ ದಾಖಲಾಗದೇ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಸೆ.13 ರಂದು ಪುತ್ತೂರಿನ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 6825 ಪ್ರಕರಣಗಳಲ್ಲಿ 817 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಪ್ರಯತ್ನಿಸಲಾಗಿದ್ದು ಈ ಪೈಕಿ 404 ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ ರೂ.2,03,33,711 ಪರಿಹಾರ ಮೊತ್ತ ವಿತರಣೆಗೆ ಆದೇಶವಾಗಿದೆ.
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ, ಜನನ ಮರಣ ನೋಂದಣಿ, ಚೆಕ್ ಬೌನ್ಸ್, ವಿಮಾ ಹಣದ ಪ್ರಕರಣ, ಬ್ಯಾಂಕ್ ಹಾಗೂ ಇತರ ಕಂಪನಿಗಳೊಂದಿಗೆ ಇರುವ ವ್ಯಾಜ್ಯಗಳಲ್ಲಿ ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.
ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶೆ ಸರಿತಾ ಡಿ ಅವರು ತರಬೇತಿಯಲ್ಲಿದ್ದು ಪ್ರಭಾರ ನೆಲೆಯಲ್ಲಿ ಮಂಗಳೂರುನಿಂದ ಬಂದಿದ್ದ ನ್ಯಾಯಾಧಿಶ ಮನು ಕೆ.ಎಸ್ ಅವರ ನ್ಯಾಯಾಲಯದಲ್ಲಿ 10 ಪ್ರಕರಣಗಳಲ್ಲಿ 6 ಇತ್ಯರ್ಥಗೊಂಡಿದ್ದು ರೂ.14,80,000 ಪರಿಹಾರ ವಿತರಣೆಗೆ ಆದೇಶ ಆಗಿದೆ.
ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧಿಶೆ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಪ್ರಕೃತಿ ಕಲ್ಯಾಣಪುರ ಅವರ ನ್ಯಾಯಾಲಯದಲ್ಲಿ 318 ಪ್ರಕರಣಗಳಲ್ಲಿ 227 ಇತ್ಯರ್ಥಗೊಂಡಿದ್ದು ರೂ.18,50,250 ಪರಿಹಾರ ವಿತರಣೆಗೆ ಆದೇಶ ಆಗಿದೆ.
ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧಿಶ ಮತ್ತು ಜೆಎಮ್ಎಫ್ ಸಿಯೂ ಆಗಿರುವ ದೇವರಾಜ್ ವೈ.ಹೆಚ್ ಅವರ ನ್ಯಾಯಾಲಯದಲ್ಲಿ 146 ಪ್ರಕರಣಗಳಲ್ಲಿ 118 ಪ್ರಕರಣ ಇತ್ಯರ್ಥಗೊಂಡಿದ್ದು, ರೂ.40,44,801 ವಿತರಣೆಗೆ ಆದೇಶ ಆಗಿದೆ.
ಪ್ರಧಾನ ಸಿವಿಲ್ ನ್ಯಾಯಾಲಯ, ಜೆಎಮ್ಎಫ್ ಸಿ ನ್ಯಾಯಾಧಿಶ ಶಿವಣ್ಣ ಹೆಚ್.ಆರ್ ಅವರ ನ್ಯಾಯಾಲಯದಲ್ಲಿ 343 ಪ್ರಕರಣಗಳಲ್ಲಿ 53 ಪ್ರಕರಣಗಳು ಇತ್ಯರ್ಥಗೊಂಡಿದ್ದು ರೂ.1,29,58,660 ವಿತರಣೆಗೆ ಆದೇಶ ಆಗಿದೆ.
ಹೆಚ್ಚುವರಿ ಸಿವಿಲ್ ನ್ಯಾಯಾಧಿಶ ಮತ್ತು ಜೆಎಮ್ಎಫ್ ಸಿ ಯೋಗೇಂದ್ರ ಶೆಟ್ಟಿ ಅವರ ನ್ಯಾಯಾಲಯದಲ್ಲಿ 186 ಪ್ರಕರಣಗಳಲ್ಲಿ 109 ಇತ್ಯರ್ಥಗೊಂಡಿದ್ದು, ರೂ.40,72,417 ವಿತರಣೆಗೆ ಆದೇಶ ಆಗಿದೆ.
2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧಿಶ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯದಲ್ಲಿ ಹೆಚ್ಚುವರಿ ಪ್ರಭಾರವನ್ನೂ ಹೊಂದಿರುವ ನ್ಯಾಯಾಽಶ ಯೋಗೇಂದ್ರ ಶೆಟ್ಟಿ ಅವರು ಅದಾಲತ್ ನಡೆಸಿದರು. ಅಲ್ಲಿ 164 ಪ್ರಕರಣಗಳಲ್ಲಿ 75 ಪ್ರಕರಣ ಇತ್ಯರ್ಥಗೊಂಡಿದ್ದು, ರೂ.7,200 ವಿತರಣೆಗೆ ಆದೇಶ ಆಗಿದೆ.ಪ್ರಕರಣಗಳ ಇತ್ಯರ್ಥಕ್ಕೆ ಸಂಧಾನಕಾರರಾಗಿ ನ್ಯಾಯವಾದಿಗಳಾದ ಭಾರತಿ ಕೆ, ತಾಹಿರಾ, ಸಂತೋಷ್ ಕೆ.ಆರ್.,ಗುರುಪ್ರಸಾದ್ ಅವರು ಸಹಕರಿಸಿದರು.ಸದ್ರಿ ವ್ಯಾಜ್ಯಗಳಲ್ಲಿ ಸಂಧಾನಕಾರ ವಕೀಲರನ್ನು ವಕೀಲರ ಸಂಘದ ಅಧ್ಯಕ್ಷ ಜಿ.ಜಗನ್ನಾಥ ರೈ ಅವರು ನೇಮಕ ಮಾಡಿದ್ದರು.