ನೆಲ್ಯಾಡಿ: ಖಾಸಗಿ ಬಸ್ಸು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಎರಡು ವಾಹನಗಳೂ ಜಖಂಗೊಂಡು, ಬಸ್ಸಿನ ಎಡಬದಿ ಸೀಟಿನಲ್ಲಿ ಕುಳಿತಿದ್ದ ಸಹಚಾಲಕ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ಅ.8ರಂದು ರಾತ್ರಿ 1.20ಕ್ಕೆ ನಡೆದಿದೆ.
ಭಟ್ಕಳದಿಂದ ಮಂಗಳೂರು ಆಗಿ ಬೆಂಗಳೂರಿಗೆ ಹೋಗುತ್ತಿದ್ದ ಎಸ್ಆರ್ಎಸ್ ಟ್ರಾವೆಲ್ಸ್ ಕಂಪನಿಯ ಬಸ್ಸು(ಕೆಎ 21, ಎಬಿ 0976)ಹಾಗೂ ಬೆಂಗಳೂರಿನಿಂದ ಬಂಗಳೂರು ಕಡೆಗೆ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬಸ್ಸು ಚಾಲಕ ಪವನ್ಕುಮಾರ್ ಕೋಲ್ಪೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಬಲ ತಿರುವಿನಲ್ಲಿ ಚಲಾಯಿಸಲು ಸೂಚನೆ ಇದ್ದ ಕಾರಣ ಬಲ ಮಾರ್ಗದಲ್ಲಿ ಡಿವೈಡರ್ನ ಎಡಭಾಗದಲ್ಲಿ ಬಸ್ಸು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಎದುರುಗಡೆಯಿಂದ ಲಾರಿ ಮುಖಾಮುಖಿಯಾಗಿ ಬರುತ್ತಿರುವುದನ್ನು ನೋಡಿ ಬಸ್ಸನ್ನು ಬಲ ಬದಿಗೆ ತಿರುಗಿಸಿದಾಗ ಲಾರಿ ಬಸ್ಸಿನ ಎದುರು ಎಡ ಭಾಗಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಸ್ಸಿನ ಎಡಬದಿ ಸೀಟಿನಲ್ಲಿ ಕುಳಿತಿದ್ದ ಸಹ ಚಾಲಕ ಹನುಮಂತ ಅವರು ಗಾಯಗೊಂಡಿದ್ದು, ಎರಡು ವಾಹನಗಳೂ ಜಖಂಗೊಂಡಿವೆ. ಘಟನೆ ಬಗ್ಗೆ ಖಾಸಗಿ ಬಸ್ಸಿನ ಚಾಲಕ ಚಿತ್ರದುರ್ಗ ನಿವಾಸಿ ಪವನ್ಕುಮಾರ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.