ರಾಮಕುಂಜ: ಹಳೆನೇರೆಂಕಿ ಹಾಗೂ ರಾಮಕುಂಜ ಗ್ರಾಮಗಳ ಗ್ರಾಮದೇವರಾದ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಕೋಟಿ ಶಿವಪಂಚಾಕ್ಷರಿ ಜಪಯಜ್ಞ, ದುರ್ಗಾಪೂಜೆ ಹಾಗೂ ಸಾಮೂಹಿಕ ಕುಂಕುಮಾರ್ಚನೆ ಅ.11 ಹಾಗೂ 12ರಂದು ನಡೆಯಿತು.
ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ವೇದಮೂರ್ತಿ ಈರಕೀಮಠ ನರಹರಿ ಉಪಾಧ್ಯಾಯರ ಉಪಸ್ಥಿತಿಯಲ್ಲಿ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಅ.11ರಂದು ಬೆಳಿಗ್ಗೆ ದೇವತಾಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಅರಣೀಮಥನ, ಆಚಾರ್ಯಕುಂಡದಲ್ಲಿ ಅಗ್ನಿಜನನ ಕ್ರಿಯೆ, ಶ್ರೀ ಮಹಾಗಣಪತಿ ಹೋಮ, ಅಗ್ನಿ ವಿಹರಣೆ, ಪಂಚಕುಂಡಗಳಲ್ಲಿ ಶಿವಪಂಚಾಕ್ಷರೀ ಯಜ್ಞ ಆರಂಭ, ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ ನಡೆಯಿತು. ಮಧ್ಯಾಹ್ನ ಹೋಮಗಳ ಪೂರ್ಣಾಹುತಿ, ಮಂಗಳಾರತಿ, ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು, ಸಂಜೆ ಸಾಮೂಹಿಕ ಕುಂಕುಮಾರ್ಚನೆ, ಶ್ರೀ ದುರ್ಗಾಪೂಜೆ, ಮಹಾಮಂಗಳಾರತಿ, ಅಷ್ಟವಧಾನ ಸೇವೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಅ.12ರಂದು ಬೆಳಿಗ್ಗೆ ಶಿವಪಂಚಾಕ್ಷರೀ ಯಜ್ಞ ಆರಂಭ, ಪುರುಷರು ಹಾಗೂ ಮಹಿಳೆಯರಿಂದ ಸಾಮೂಹಿಕ ಬಿಲ್ವಾರ್ಚನೆ, ಶಿವಪಂಚಾಕ್ಷರಿ ಜಪ, ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ ನಡೆಯಿತು. ಶಿವಪಂಚಾಕ್ಷರಿ ಜಪ ಮಹಾಯಜ್ಞದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಭಕ್ತರ ಸಭೆ, ಬಳಿಕ ಶಿವಪಂಚಾಕ್ಷರಿ ಹೋಮದ ಮಹಾಪ್ರಸಾದ ವಿತರಣೆ ಮಾಡಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಹಾಗೂ ಸದಸ್ಯರು, ಶ್ರೀ ದೇವಳದ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಶ್ರೀ ದೇವಳದ ಅರ್ಚಕರು, ಸಿಬ್ಬಂದಿಗಳು, ಬೈಲುವಾರು ಸಂಚಾಲಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
1.34 ಕೋಟಿ ಜಪ;
ಕೋಟಿ ಶಿವಪಂಚಾಕ್ಷರಿ ಜಪ ಯಜ್ಞಕ್ಕೆ ಪೂರ್ವಭಾವಿಯಾಗಿ ರಾಮಕುಂಜ ಹಾಗೂ ಹಳೆನೇರೆಂಕಿ ಗ್ರಾಮಗಳಲ್ಲಿ ನೂರಾರು ಭಕ್ತರು ದೇವರ ನಾಮಸ್ಮರಣೆ ಜಪ ಮಾಡಿದ್ದರು. ಬೆಳಿಗ್ಗೆ ಅಥವಾ ಸಾಯಂಕಾಲ ಶುಚಿರ್ಭೂತರಾಗಿ ಮಡಿಯುಟ್ಟು ಶ್ರೀ ದೇವರಿಗೆ ದೀಪ ಬೆಳಗಿಸಿ, ಹಣೆಗೆ ತಿಲಕವಿಟ್ಟು’ ಕೈಯಲ್ಲಿ ತುಪ್ಪದ ಕರಡಿಗೆ ಹಿಡಿದುಕೊಂಡು ಭಕ್ತರು ಕಳೆದ 1 ತಿಂಗಳಿನಿಂದ ಪ್ರತಿದಿನ ದೇವರ ನಾಮಸ್ಮರಣೆಯೊಂದಿಗೆ ತಮ್ಮಿಂದ ಸಾಧ್ಯವಾದಷ್ಟು ದೇವರ ನಾಮಸ್ಮರಣೆ ಜಪ ಮಾಡಿದ್ದರು. ಈ ರೀತಿಯಾಗಿ ಭಕ್ತರು ಸುಮಾರು 1.34 ಕೋಟಿ ಜಪ ಮಾಡಿ ತುಪ್ಪವನ್ನು ದೇವರಿಗೆ ಸಮರ್ಪಣೆ ಮಾಡಿದ್ದರು.