VCET : ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು ಪೋಷಕರ ಸಮಾಲೋಚನಾ ಸಭೆ

0

ಪುತ್ತೂರು: ಕಾಲೇಜಿನಲ್ಲಿ ಕಲಿಯುತ್ತಿರುವ ನಿಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ದಿಯನ್ನು ತಿಳಿದುಕೊಳ್ಳುವುದಕ್ಕಾಗಿ ಹೆತ್ತವರು ಅಥವಾ ಪೋಷಕರು ನಿಯಮಿತವಾಗಿ ಕಾಲೇಜಿನ ಸಂಪರ್ಕದಲ್ಲಿರುವುದು ಆವಶ್ಯಕ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ ಮತ್ತು ಪೇರೆಂಟ್ ರಿಲೇಶನ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಸಾವರ್ಕರ್ ಸಭಾಭವನದಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು ಪೋಷಕರ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು.

ವಿದ್ಯಾರ್ಥಿಗಳು ಕಾಲೇಜಿನ ಚಟುವಟಿಕೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೇ ಗೊಂದಲಗಳು ಉಂಟಾದ ಹಲವಾರು ಉದಾಹರಣೆಗಳು ನಮ್ಮ ಮುಂದಿದ್ದು, ಉಪನ್ಯಾಸಕರು, ವಿಭಾಗ ಮುಖ್ಯಸ್ಥರು ಅಥವಾ ಪ್ರಾಂಶುಪಾಲರ ಜತೆಗೆ ಚರ್ಚಿಸಿಯೇ ನೀವು ಮುಂದಡಿ ಇಡಬೇಕು ಎಂದು ಹೇಳಿದರು.


ಕಾಲೇಜಿನ ಬೆಳ್ಳಿಹಬ್ಬದ ಪ್ರಯುಕ್ತ ಪಂಚವಿಂಶತಿ ಸರಣಿ ಕಾರ್ಯಕ್ರಮಗಳು ನಡೆಯುತ್ತಿವೆ ಇದರಲ್ಲಿ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಕಾಲೇಜಿನ ಆವರಣದಲ್ಲಿ ಹೊಸ ಸ್ಟಾರ್ಟ್-ಅಪ್‌ಗಳನ್ನು ಪ್ರಾರಂಭಿಸಲಾಗಿದ್ದು ಇದು ವಿದ್ಯಾರ್ಥಿಗಳಿಗೆ ಉದ್ಯಮಕ್ಕೆ ಸಂಬಂದಿಸಿದ ತಿಳುವಳಿಕೆಯನ್ನು ನೀಡುವುದಕ್ಕೆ ಸಹಕಾರಿಯಾಗುತ್ತದೆ ಎಂದರು.


ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಮಾತನಾಡಿ ಹೊಸ ಶೈಕ್ಷಣಿಕ ಪದ್ದತಿಯ ಪ್ರಕಾರ ವಿದ್ಯಾರ್ಥಿಗಳ ಹಾಜರಾತಿ, ಆಂತರಿಕ ಮೌಲ್ಯಮಾಪನ, ಅಂಕಗಳು ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ನೀಡಿದರು. ಪೋಷಕರು, ಶಿಕ್ಷಕರು, ಸಿಬ್ಬಂದಿಗಳು ವಿದ್ಯಾರ್ಥಿಗಳು ಮತ್ತು ಸಂಸ್ಥೆ ಇದರ ನಡುವಿನ ಬಾಂಧವ್ಯವು ಗಟ್ಟಿಯಾದಷ್ಟು ಸಂಸ್ಥೆ ಬೆಳೆಯುವುದಕ್ಕೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಹೆತ್ತವರ ಮತ್ತು ಪೋಷಕರ ಸಹಕಾರ ಅಗತ್ಯ ಎಂದು ಹೇಳಿದರು.


ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಮತ್ತು ತಮಗಿದ್ದ ಸಂಶಯಗಳನ್ನು ನಿವಾರಿಸಿಕೊಂಡರು. ಸಭಾ ಕಾರ್ಯಕ್ರಮದ ಬಳಿಕ ತಮ್ಮ ಮಕ್ಕಳಿಗೆಕಲಿಸುವ ಎಲ್ಲಾ ಪ್ರಾಧ್ಯಾಪಕರ ಜತೆ ಪೋಷಕರು ಸಂವಹನವನ್ನು ನಡೆಸಿದರು.


ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಟಿ.ಎಸ್.ಸುಬ್ರಮಣ್ಯ ಭಟ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕರಾದ ಸತ್ಯನಾರಾಯಣ ಭಟ್ ಮತ್ತು ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರೊ. ತೇಜಸ್ವಿನಿ.ಎಲ್.ಪಿ ಸ್ವಾಗತಿಸಿದರು. ಪೇರೆಂಟ್ ರಿಲೇಶನ್ ಸೆಲ್‌ನ ಮುಖ್ಯ ಸಂಯೋಜಕಿ ಡಾ.ಶ್ವೇತಾಂಬಿಕಾ.ಪಿ ಪ್ರಸ್ತಾವನೆಗೈದರು. ಸಂಯೋಜಕಿ ಪ್ರೊ.ಶ್ರೀಶರಣ್ಯ ಯು.ಆರ್ ವಂದನಾರ್ಪಣೆಗೈದರು. ಪ್ರೊ.ಸಂಯಕ್ತ್.ಜೆ ಹಾಗೂ ಪ್ರೊ.ಶರಣ್ಯ.ಕೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here