ಲಾಯಿಲ: ಇಲ್ಲಿಯ ಕಕ್ಕೇನಾದಿಂದ ಅಂಬೇಡ್ಕರ್ ನಗರಕ್ಕೆ ಸಂಪರ್ಕಿಸುವ ರಸ್ತೆಯನ್ನು ಕೆಲವು ವರ್ಷಗಳ ಹಿಂದೆಯಷ್ಟೇ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ತಾಲೂಕು ಪಂಚಾಯತ್ ಅನುದಾನದಿಂದ ಮೋರಿ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಇದೀಗ ಕಾಂಕ್ರೀಟ್ ರಸ್ತೆಯ ಅಂಚಿನಲ್ಲಿ ಹಾಗೂ ಮೋರಿಯಲ್ಲಿ ಬೃಹತ್ ಗಾತ್ರದ ಗುಂಡಿಗಳು ನಿರ್ಮಾಣವಾಗಿ ಬಲಿಗಾಗಿ ಕಾಯುವಂತಿದೆ.
ಕಾಮಗಾರಿ ನಡೆದ ಸಂದರ್ಭದಲ್ಲಿಯೇ ಕಳಪೆ ಗುಣಮಟ್ಟದ ಕಾಮಗಾರಿ ಎಂಬ ಆರೋಪ ಕೇಳಿ ಬಂದಿತು . ಇದಕ್ಕೆ ಪೂರಕವಾಗಿ ಕೆಲವೇ ಸಮಯದಲ್ಲಿ ರಸ್ತೆ ಹಾಗೂ ಮೋರಿ ಬಿರುಕು ಬಿಟ್ಟದನ್ನು ಸ್ಥಳೀಯ ಗ್ರಾಮಸ್ಥರು ಪಂಚಾಯತ್ ಗಮನಕ್ಕೆ ತಂದಿದಲ್ಲದೆ ಮಾದ್ಯಮದಲ್ಲಿ ವರದಿ ಬಿತ್ತರವಾದ ಬೆನ್ನಲ್ಲೇ ಎಚ್ಚೆತ್ತ ಲಾಯಿಲ ಗ್ರಾಮ ಪಂಚಾಯತ್ ತಾತ್ಕಾಲಿಕ ದುರಸ್ತಿ ಕಾಮಗಾರಿಯನ್ನು ನಡೆಸಿತ್ತು.
ಪ್ರಸ್ತುತ ವಿಪರೀತ ಮಳೆಯಿಂದಾಗಿ ಮೋರಿ ಹಾಗೂ ಕಾಂಕ್ರೀಟ್ ರಸ್ತೆಯ ಒಳ ಭಾಗದಲ್ಲಿ ಬಹುದೊಡ್ಡ ಪ್ರಮಾಣದ ಬಿರುಕು ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಈ ರಸ್ತೆಯಲ್ಲಿ ದಿನನಿತ್ಯ ಶಾಲಾ , ಕಾಲೇಜ್ ಮಕ್ಕಳು , ನಾಗರಿಕರು ಸಂಚಾರಿಸುತ್ತಾರೆ. ದ್ವಿಚಕ್ರ , ಅಟೋ ರಿಕ್ಷಾಗಳೂ ಸಂಚರಿಸುತ್ತವೆ . ಇದೀಗ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು , ಕೂಡಲೇ ಸ್ಥಳೀಯ ಗ್ರಾಮ ಪಂಚಾಯತ್ ರಸ್ತೆ , ಮೋರಿಯ ಅಪಾಯಕಾರಿ ಗುಂಡಿಗಳನ್ನು ಅನಾಹುತ ಸಂಭವಿಸುವ ಮೊದಲು ಮುಚ್ಚುವ ತುರ್ತು ಕಾರ್ಯ ನಡೆಸಬೇಕು ಎಂದು ಸ್ಥಳೀಯರು ಪರವಾಗಿ ಕರ್ನಾಟಕ ದಲಿತ ಸಂಘ ಸಮಿತಿ ಅಂಬೆಡ್ಕರ್ ಭವನ ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯ ನಾಗರಾಜ್. ಎಸ್ ಲಾಯಿಲ ಒತ್ತಾಯಿಸಿದ್ದಾರೆ.