![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
- ಸೈನಿಕರಿಗೆ ಬೆಂಬಲ, ಅಭಿಮಾನ ಸೂಚಿಸಿದ್ದಕ್ಕೆ ಬಂದ ಪ್ರತಿಕ್ರಿಯೆ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಭಾರತೀಯ ಸೇನೆಯ ಪರವಾಗಿ ಸೇನೆಯ ಅಧಿಕಾರಿಯವರು ಕೃತಜ್ಞತಾ ಪತ್ರ ಬರೆದಿರುತ್ತಾರೆ. ಅಂಬಿಕಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇತ್ತೀಚೆಗೆ ಭಾರತೀಯ ಸೈನಿಕರಿಗೆ ಶುಭಹಾರೈಸುತ್ತಾ, ಅವರಿಗೆ ಬೆಂಬಲವನ್ನು ಸೂಚಿಸಿ ಪತ್ರಗಳನ್ನು ರವಾನಿಸಿದ್ದರು. ಇದಕ್ಕೆ ಪ್ರತಿಯಾಗಿ ಇದೀಗ ಸೈನ್ಯದಿಂದ ಪತ್ರ ಬಂದಿದೆ.
ಅಂಬಿಕಾ ವಿದ್ಯಾಸಂಸ್ಥೆ ಭಾರತೀಯ ಸೈನ್ಯದ ಬಗೆಗೆ, ಸೈನಿಕರ ಬಗೆಗೆ ಅಪಾರ ಗೌರವವನ್ನು ಹೊಂದಿದ್ದು, ವಿದ್ಯಾರ್ಥಿಗಳಲ್ಲಿಯೂ ಅಂತಹ ಸಂಸ್ಕಾರವನ್ನು ತುಂಬುತ್ತಾ ಬಂದಿದೆ. ಪರಿಣಾಮವಾಗಿ ಸೈನಿಕರ ಮಕ್ಕಳಿಗೆ ವಿಶೇಷ ರಿಯಾಯಿತಿಯಲ್ಲಿ ಶಿಕ್ಷಣ ನೀಡುವ ಪದ್ಧತಿ ಈ ಸಂಸ್ಥೆಯಲ್ಲಿ ಬೆಳೆದು ಬಂದಿದೆ. ಹಾಗೆಯೇ ಸೈನಿಕರು ವೀರಮರಣವನ್ನಪ್ಪಿದಾಗ ಅವರಿಗೆ ಸಹಾಯಹಸ್ತ ಚಾಚುವ ಮನೋಭಾವವನ್ನು ಇಲ್ಲಿನ ವಿದ್ಯಾರ್ಥಿಗಳು ಬೆಳೆಸಿಕೊಂಡಿದ್ದಾರೆ. ಕೆಲಸಮಯದ ಹಿಂದೆ ಹುತಾತ್ಮ ಸೈನಿಕರ ಕುಟುಂಬಕ್ಕೆ ವಿದ್ಯಾರ್ಥಿಗಳೆಲ್ಲರೂ ಸೇರಿ ಧನಸಹಾಯವನ್ನು ಒದಗಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಂಸ್ಥೆಯ ಪ್ರಾಚಾರ್ಯರಿಗೆ ಭಾರತೀಯ ಸೈನ್ಯದ ಪರವಾಗಿ ಬರೆದ ಪತ್ರದಲ್ಲಿ ಮೇಜರ್ ಜನರಲ್ ವಿಜಯ್ ಸಿಂಗ್ ಅವರು ವಿದ್ಯಾರ್ಥಿಗಳು ಸೈನಿಕರಿಗೆ ಬರೆದ ಪ್ರೇರಣಾದಾಯಿ ಪತ್ರಗಳಿಗೆ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಸಮರ್ಪಿಸಿದ್ದಾರೆ. ಅಂತೆಯೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. ಪತ್ರದ ಕುರಿತು ಪ್ರತಿಕ್ರಿಯಿಸಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ‘ಭಾರತದ ನೆಲದಲ್ಲಿ ಹುಟ್ಟಿ ಭಾರತೀಯ ಸೈನ್ಯದ ಜತೆ ಇರಬೇಕಾದದ್ದು ನಾಗರಿಕರಾದವರ ಕರ್ತವ್ಯ. ದೇಶವನ್ನು ಹಾಗೂ ಸೈನಿಕರನ್ನು ಅಭಿಮಾನದಿಂದ ಕಾಣಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿ. ಇಂತಹ ಸಂಸ್ಕಾರವನ್ನು ಅಂಬಿಕಾ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತಿವೆ. ಇಲ್ಲಿನ ವಿದ್ಯಾರ್ಥಿಗಳು ದೇಶಪ್ರೇಮಿಗಳಾಗಿ ಹೊರಬರುತ್ತಾರೆ ಎಂಬುದು ನಮ್ಮ ಹೆಮ್ಮೆ’ ಎಂದಿದ್ದಾರೆ.