ಪುತ್ತೂರು: ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಧ್ಯಾಪಕರಿಲ್ಲದೆ ಮುಚ್ಚುವಂತಹ ಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಅನುದಾನಿತ ಶಾಲೆಗಳಿಗೂ ಅತಿಥಿ ಶಿಕ್ಷಕರನ್ನು ನೇಮಕ ಮಾಡುವಂತೆ ಶಾಸಕ ಸಂಜೀವ ಮಠಂದೂರು ಅವರು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ ಘಟನೆ ಮಾ.11ರಂದು ನಡೆದಿದ್ದು, ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಾತನಾಡಿ ಸರಕಾರದಿಂದ ಪಾಲಿಸಿ ಮೇಟರ್ ನಿರ್ಣಯಕ್ಕೆ ಮುಖ್ಯಮಂತ್ರಿ ಜೊತೆ ಮಾತನಾಡುವುದಾಗಿ ಉತ್ತರಿಸಿದ್ದಾರೆ.
ಸರಕಾರಿ ಪದವಿ ಪೂರ್ವ ಮತ್ತು ಸರಕಾರಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಪಠ್ಯ ಪ್ರವಚನಕ್ಕೆ ಅನುಕೂಲ ಮಾಡುತ್ತೇವೆ ಈಗಾಗಲೇ ಸಚಿವರು ತಿಳಿಸಿದ್ದಾರೆ. ಆದರೆ ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಧ್ಯಾಪಕರಿಲ್ಲದೆ ಮುಚ್ಚುವಂತಹ ಪರಿಸ್ಥಿತಿ ಬಂದಿದೆ. ನಮ್ಮಲ್ಲಿ ಶೂನ್ಯ ಅಧ್ಯಾಪಕರ ಶಾಲೆ ಇದೆ. 10 ಅನುದಾನಿತ ಶಾಲೆಗಳಲ್ಲಿ113 ಹುದ್ದೆಯಲ್ಲಿ 92 ಹುದ್ದೆ ಖಾಲಿ ಇದೆ ಎಂದು ಪ್ರಸ್ತಾಪಿಸಿದ ಶಾಸಕ ಸಂಜೀವ ಮಠಂದೂರು ಅವರು ಕನ್ನಡ ಮಾದ್ಯಮ ಶಾಲೆ ಉಳಿಸಬೇಕೆಂಬ ನಿಟ್ಟಿನಲ್ಲಿ ಸರಕಾರಿ ಶಾಲೆಗೆ ಹೇಗೆ ಅತಿಥಿ ಉಪನ್ಯಾಸಕರನ್ನು ಕೊಟ್ಟಿದ್ದಾರೋ ಅದೇ ರೀತಿಯಲ್ಲಿ ಈ ಅನುದಾನಿತ ಶಾಲೆಗಳಿಗೂ ಅತಿಥಿ ಶಿಕ್ಷಕರನ್ನು ಕೊಡಬೇಕೆಂದು ಆಗ್ರಹಿಸಿದರು. ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಚಿವ ಬಿ.ಸಿ ನಾಗೇಶ್ ಅವರು ಸದ್ಯಕ್ಕೆ ಆ ಯಾವ ಪದ್ಧತಿ ಇಲ್ಲ. ಬರಿ ಸರಕಾರಿ ಶಾಲೆ ಖಾಲಿ ಹುದ್ದೆಗೆ ಅತಿಥಿ ಶಿಕ್ಷಕರನ್ನು ನೇಮಕ ವ್ಯವಸ್ಥೆ ಇದೆ. ಮುಂದಿನ ದಿನ ಸರಕಾರ ಹಂತದಲ್ಲಿ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇವೆ ಎಂದರು.