ಪುತ್ತೂರು: ಗ್ರಾಮೀಣ ಭಾಗದ ಜನರು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಲು ಮುಂದಾಗಿರುವ ರಾಜ್ಯ ಸರಕಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದ್ದು, ಯುವ ಜನತೆಗೆ ಕೇಂದ್ರ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ.
ಸರಕಾರಿ ಸೇವೆಗಳನ್ನು ಪಡೆಯಲು ಗ್ರಾಮೀಣ ಭಾಗದ ಜನರು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಹೋಗಿಬರಬೇಕಾದ ಪರಿಸ್ಥಿತಿಯಿದೆ. ಆ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಗ್ರಾಮ ಒನ್ ಕೇಂದ್ರ ತೆರೆಯುತ್ತಿದ್ದು, ನೂರಾರು ಸೇವೆಗಳು ಜನರಿಗೆ ಗ್ರಾಮಗಳಲ್ಲಿಯೇ ಲಭ್ಯವಾಗಲಿವೆ.
ಸರಕಾರಿ ಸೇವೆಗಳನ್ನು ಪಡೆಯಲು ಸರಕಾರಿ ಕಚೇರಿಗಳಿಗೆ ಪ್ರಯಾಣಿಸುವ ಸಮಯ ಮತ್ತು ಹಣ ಖರ್ಚು ಮಾಡುವುದನ್ನು ಈ ಕೇಂದ್ರಗಳು ತಪ್ಪಿಸಲಿದ್ದು, ಸರತಿ ಸಾಲಿನಲ್ಲಿ ಸೇವೆಗಳಿಗಾಗಿ ಕಾಯುವುದನ್ನು ತಪ್ಪಿಸುತ್ತದೆ. ಇನ್ನು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸರಕಾರಿ ಸೇವೆಗಳು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶವನ್ನು ಕೇಂದ್ರಗಳು ಹೊಂದಿವೆ. ಅದರಲ್ಲಿಯೂ ಪ್ರಮುಖವಾಗಿ ನಾಗರಿಕರ ಅನುಕೂಲಕ್ಕಾಗಿ ಗ್ರಾಮ ಒನ್ ಕೇಂದ್ರಗಳು ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ತೆರೆದಿರುವುದರಿಂದ ಜನರು ಬಿಡುವಿನ ಸಮಯದಲ್ಲಿ ಕೇಂದ್ರಗಳಿಗೆ ಹೋಗಿ ತಮಗೆ ಬೇಕಾದ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಗ್ರಾಮ ಒನ್ ಕೇಂದ್ರಗಳು ಜನರಿಗೆ ನೂರಾರು ಸರಕಾರಿ ಸೇವೆಗಳನ್ನು ಒದಗಿಸುವ ಜತೆ ಜತೆಗೆ ಸಾವಿರಾರು ಉದ್ಯೋಗಗಳನ್ನು ಸಹ ಸೃಷ್ಟಿಸುತ್ತಿದೆ. ಅದರಂತೆ ಪದವೀಧರ ಯುವಕರು ಗ್ರಾ.ಪಂ. ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಮೇ 4 ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ತಹಶೀಲ್ದಾರ್ ರಮೇಶ್ ಬಾಬು ಅವರು ತಿಳಿಸಿದ್ದಾರೆ.