- ಈಗಾಗಲೇ ನಿರ್ಮಾಣಗೊಂಡಿರುವ ನಾಗನಕಟ್ಟೆಯನ್ನು ತೆರವುಗೊಳಿಸಿ ನೂತನ ಕಟ್ಟೆ ನಿರ್ಮಿಸಬೇಕು
- ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ಮುಂದಿ ಕಾರ್ಯಗಳನ್ನು ಮಾಡಬೇಕು
- ಮುಂದಿನ ಉತ್ತರಾಯನಕ್ಕೆ ನಾಗನ ಪ್ರತಿಷ್ಠೆ ನಡೆಸುವುದು
- ಈ ತನಕ ನಡೆದ ಕೆಲಸ ಕಾರ್ಯಗಳ ಬಗ್ಗೆ ಪ್ರಶ್ನಾ ಚಿಂತನೆ ನಡೆಸುವುದು ಅಗತ್ಯವಿಲ್ಲ
ಪುತ್ತೂರು:ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಾಗನ ಕಟ್ಟೆ ನಿರ್ಮಾಣದ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಜೂ.23ರಂದು ಗೊಂದಲ ನಿವಾರಣಾ ಸಭೆ ನಡೆದಿದ್ದು, ಈ ಸಭೆಯಲ್ಲಿ ಸುದೀಘ ಚರ್ಚೆಗಳು ನಡೆದು, ಈಗಾಗಲೇ ನಿರ್ಮಾಣಗೊಂಡಿರುವ ನಾಗನಕಟ್ಟೆಯನ್ನು ತೆರವುಗೊಳಿಸಿ ನೂತನ ಕಟ್ಟೆ ನಿರ್ಮಿಸುವುದು, ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ಮುಂದಿನ ಕಾರ್ಯಗಳನ್ನು ಮಾಡುವುದು. ಮುಂದಿನ ಉತ್ತರಾಯನಕ್ಕೆ ನಾಗನ ಪ್ರತಿಷ್ಠೆ ನಡೆಸುವುದು ಹಾಗೂ ಈ ತನಕ ನಡೆದ ಕೆಲಸ ಕಾರ್ಯಗಳ ಬಗ್ಗೆ ಪ್ರಶ್ನಾ ಚಿಂತನೆ ನಡೆಸುವುದು ಅಗತ್ಯವಿಲ್ಲ ಎಂದು ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಗಿದೆ.
ಸಭೆಯು ದೈವಜ್ಞ ಶಶೀಂದ್ರ ನಾಯರ್ ಕುತ್ತಿಕೋಲ್, ತಂತ್ರಿಗಳಾದ ಕೆಮ್ಮಿಂಜೆ ನಾಗೇಶ್ ತಂತ್ರಿ, ಕಾರ್ತಿಕ್ ತಂತ್ರಿ, ವಾಸ್ತು ಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ ಹಾಗೂ ಧಾರ್ಮಿಕ ದತ್ತಿ ಇಲಾಖಾಧಿಕಾರಿ ಶ್ರೀಧರ್ರವರ ಸಮ್ಮುಖದಲ್ಲಿ ಗೊಂದಲ ನಿವಾರಣಾ ಸಭೆ ನಡೆಯಿತು. ಉಂಟಾಗಿರುವ ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ನಡೆಸಿರುವ ಸಭೆಯಲ್ಲಿ ಪ್ರಾರಂಭದಿಂದ ಅಂತ್ಯದವರೇಗೆ ಚರ್ಚೆಗಳು ನಡೆದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆ ಆರೋಪಗಳ ಸುರಿಮಳೆಯೇ ಸಭೆಯಲ್ಲಿ ವ್ಯಕ್ತವಾಯಿತು. ಗೊಂದಲ ನಿವಾರಿಸಲು ದೈವಜ್ಞರು, ತಂತ್ರಿಗಳು, ವಾಸ್ತು ಶಿಲ್ಪಿಗಳು, ಧಾರ್ಮಿಕ ಪರಿಷತ್, ದತ್ತಿ ಇಲಾಖೆಯ ಸಮ್ಮುಖದಲ್ಲಿ ಸಭೆ ನಡೆದರೂ ಕೊನೆಗೂ ಭಕ್ತಾದಿಗಳ ಆಗ್ರಹದಂತೆ ಅಂತಿಮ ತೀರ್ಮಾಣಗಳು ನಡೆದಿದೆ. ಚರ್ಚೆ ನಡೆಯುವ ಸಂದರ್ಭದಲ್ಲಿ ತಂತ್ರಿಗಳು, ಶಿಲ್ಪಿಗಳು, ದೈವಜ್ಞರನ್ನು ಕರೆದ ಉದ್ದೇಶವೇನು? ಚರ್ಚೆ ನಡೆಸುವುದಾದರೆ ನಾವು ಯಾಕೆ. ಪ್ರಶ್ನೆ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳುವ ಎಂದು ದೈವಜ್ಞರು ಪದೇ ಪದೇ ಕೇಳಿಕೊಂಡರೂ ಅದಕ್ಕೆ ಯಾವುದೇ ಸ್ಪಂದನೆ ದೊರೆತಿಲ್ಲ.
ಗೊಂದಲದ ಗೂಡಾದ ಗೊಂದಲ ನಿವಾರಣಾ ಸಭೆ:
ನಾಗನ ಕಟ್ಟೆ ನಿರ್ಮಾಣದ ಬಗ್ಗೆ ಉಂಟಾಗಿರುವ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ವ್ಯವಸ್ಥಾಪನಾ ಸಮಿತಿಯವರ ನಡೆಸಿದ ಗೊಂದಲ ನಿವಾರಣಾ ಸಭೆಯಲ್ಲಿ ಆರೋಪ, ಪ್ರತ್ಯಾರೋಪಗಳು, ಒಬ್ಬೊಬ್ಬರ ಅಭಿಪ್ರಾಯ, ಹೇಳಿಕೆಗಳ ಮಧ್ಯೆ ಸಭೆಯು ಗೊಂದಲದ ಗೂಡಾಗಿ ಪರಿಣಮಿಸಿತ್ತು. ಸಭೆಯ ಅಂತ್ಯ ಕಾಣುವ ಲಕ್ಷಣಗಳೇ ಕಾಣುತ್ತಿರಲಿಲ್ಲ. ಮಾಡಿದ ಕಾರ್ಯಗಳ ಬಗ್ಗೆ ದೈವಹಿತ ಇದೆಯ ಎಂದು ರಾಶಿಯಲ್ಲಿ ನೋಡುವ ಎಂದು ದೈವಜ್ಞರು ಸಲಹೆ ನೀಡಿದರೂ, ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಮಾಡಿಲ್ಲ. ಹೀಗಾಗಿ ಸರಿಯಾಗಿಲ್ಲ ಎಂಬುದು ಅಲ್ಲಿ ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಿರುವಾಗ ಪ್ರಶ್ನೆ ನಡೆಸುವ ಅಗತ್ಯವಿದೆಯಾ ಎಂಬ ಪ್ರಶ್ನೆಗಳು ವ್ಯಕ್ತವಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರುಗಳು, ಭಕ್ತಾದಿಗಳು ಈಗಿನ ವ್ಯವಸ್ಥಾಪನಾ ಸಮಿತಿಯಿಂದ ನಡೆದ ಕಾರ್ಯಗಳ ಬಗ್ಗೆ ಒಂದರ ಮೇಲೋಂದರಂತೆ ಆರೋಪಗಳನ್ನು ಮಾಡುತ್ತಾ ಸಾಗಿದರು. ೪೮ ದಿನಗಳ ವ್ರತಾಚರಣೆ ಮಾಡಬೇಕು ಎಂದಿದ್ದರೂ ಅದೂ ನಡೆದಿಲ್ಲ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡರವರು ಸ್ಪಷ್ಟಣೆ ನೀಡಲು ಹಲವು ಬಾರಿ ಮುಂದಾದರೂ ಅವರಿಗೆ ಅವಕಾಶಗಳೇ ದೊರೆಯದೆ ಗ್ರಾಮಸ್ಥರು ಒಂದರ ಮೇಲೊಂದರಂತೆ ಆರೋಪಗಳನ್ನು ಮಾಡುತ್ತಿದ್ದರು.
ಊರವನ್ನು ಸೇರಿಸಿಕೊಂಡು ಕೆಲಸ ಕಾರ್ಯ:
ಪ್ರಾಸ್ತಾವಿಕವಾಗಿ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ದನ ಜೋಯಿಷರವರು, ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳಿಗೆ ಪರಿಹಾರ ನಡೆಸಿ ಜೂ.21 ಪ್ರತಿಷ್ಠ ಪ್ರತಿಷ್ಟ ನಡೆಸಬೇಕು ಎಂಬ ದೃಷ್ಠಿಯಿಂದ ಕಾಮಗಾರಿ ಶೀಘ್ರ ನಡೆಸಲಾಗಿದೆ. ಪ್ರಶ್ನೆಯಲ್ಲಿ ಕಂಡು ಬಂದ ಶಿಲ್ಪಿಯನ್ನು ಸಂಪರ್ಕ ಮಾಡಿ ಅವರ ಮಾರ್ಗದರ್ಶನದಂತೆ ಮೂಲ ಸ್ಥಳದಲ್ಲಿ ಕಟ್ಟೆಯ ನಿರ್ಮಾಣ ನಡೆಸಲಾಗಿದೆ. ಸ್ಥಳದಲ್ಲಿದ್ದ ಮರವನ್ನು ತಂತ್ರಿಗಳ ಮೂಲಕ ಪೂಜೆ ನಡೆಸಿ ಅದನ್ನು ತೆರವುಗೊಳಿಸಿ ಬಳಿಕ 9 ಅಡಿ ಕಪ್ಪುಕಲ್ಲು ಹಾಸಿ ಮುಚ್ಚಿ ಕಟ್ಟೆ ನಿರ್ಮಿಸಲಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಊರವರನ್ನು ಸೇರಿಸಿಕೊಂಡು ಮಾಡಲಾಗಿದೆ. ಕಾಲಾವಕಾಶ ಕಡಿಮೆ ಇರುವುದರಿಂದ ಶೀಘ್ರದಲ್ಲಿ ಮಾಡಲಾಗಿದೆ. ಮುಂದಿನ ವರ್ಷ ಬ್ರಹ್ಮಕಲಶ, ಪುಷ್ಕರಿಣಿ ಅಭಿವೃದ್ಧಿ, ಅರ್ಚಕರ ವಸತಿ ಗೃಹ ನಿರ್ಮಾಣ ಆಗಬೇಕು. ಸಾರ್ವಜನಿಕರ ದೇಣಿಗೆ ಮೂಲಕ ನಿರ್ಮಾಣ ನಡೆಯುತ್ತಿದೆ. ಇದರಲ್ಲಿ ಯಾವ ರೀತಿ ಲೋಪ ದೋಷ ಆಗಿಲ್ಲ. ತಪ್ಪಾಗಿದ್ದರೆ ಸರಿಪಡಿಸಿಕೊಂಡು ಮುಂದುವರಿವ ನಿಟ್ಟಿನಲ್ಲಿ ಸಭೆ. ಸಾರ್ವಜನಿಕರ ಸಲಹೆಯಂತೆ ಮುಂದಿನ ಕಾರ್ಯ ನಡೆಸಲಾಗುವುದು ಎಂದರು.
ಅಷ್ಟಮಂಗಲದಲ್ಲಿ ಕಂಡು ಬಂದಂತೆ ಮಾಡಿಲ್ಲ. ಹೇಳಿದ್ದ ಶೇ.100 ಸುಳ್ಳು:
ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಯಾವುದು ಆಗಿಲ್ಲ. ಅವರು ಹೇಳುತ್ತಿರುವುದು ಶೇ.100 ರಷ್ಟು ಸುಳ್ಳು. ಸ್ಥಳದಲ್ಲಿದ್ದ ಮರವನ್ನು ತೆರವುಗೊಳಿಸಬಾರದು ಎಂದು ಪ್ರಶ್ನೆಯಲ್ಲಿ ತಿಳಿಸಲಾಗಿದ್ದರೂ ಮರ ತೆರವುಗೊಳಿಸಿದ್ದಾರೆ. ಈಗಾಗಲೇ ನಡೆದ ಕಾಮಗಾರಿಗಳು ಸರಿಯಾಗಿಲ್ಲ ಎಂದು ಎದ್ದು ಕಾಣುತ್ತಿದ್ದು ಅದೇ ವಿಚಾರದಲ್ಲಿ ಮತ್ತೆ ಪ್ರಶ್ನೆ ನಡೆಸುವ ಅಗತ್ಯವಿಲ್ಲ. ಕಟ್ಟೆ ನಿರ್ಮಾಣದಲ್ಲಿ ಮರಳನ್ನು ಗಾಳಿಸಿ, ತೊಲೆದು ಹಾಕಬೇಕು ಎಂದು ಪ್ರಶ್ನೆಯಲ್ಲಿ ಕಂಡು ಬಂದಿದ್ದರೂ ಆ ರೀತಿ ಮಾಡಿಲ್ಲ. ಸಾರ್ವಜನಿಕರುನ್ನು ಸೇರಿಸಿಕೊಂಡು ಮಾಡುವಂತೆ ಸೂಚಿಸಿದ್ದರೂ ಆ ರೀತಿ ಮಾಡಿಲ್ಲ. ಶೌಚಾಲಯ ಕಟ್ಟಿದ ಹಾಗೆ ಗುತ್ತಿಗೆ ನೀಡಲಾಗಿದೆ. ಪ್ರಶ್ನೆಯಲ್ಲಿ ಕಂಡು ಬಂದದ್ದನ್ನು ಮತ್ತೆ ಮತ್ತೆ ಪ್ರಶ್ನೆ ಮಾಡುವುದಾರೆ ಅರ್ಥವಿಲ್ಲ. ಪ್ರಶ್ನೆಯಲ್ಲಿ ಸೂಚಿಸಿದಂತೆ ಕಟ್ಟೆ ನಿರ್ಮಾಣವಾಗಿಲ್ಲ ಎಂಬುದು ಊರವರ ಅಭಿಪ್ರಾಯ. ಇದರಲ್ಲಿ ಊರಿನವರಿಗೆ ಗೊಂದಲವಿಲ್ಲ. ಗೊಂದಲವಿರುವುದು ಸಮಿತಿಯವರಿಗೆ, ಇದೇ ರೀತಿ ಮುಂದುವರಿದರೆ ದುರಂತ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತದೆ ಎಂದರು.