ಪುತ್ತೂರು: ಶತಮಾನ ಪೂರೈಸಿದ ಸಾರ್ಥಕ ಸೇವೆಯನ್ನು ಗುರುತಿಸಿ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ಗೆ ಪ್ರತಿಷ್ಠಿತ ರಾಷ್ಟ್ರೀಯ ಗೌರವ ಲಭಿಸಿದೆ. ದೆಹಲಿಯಲ್ಲಿ ಕೇಂದ್ರ ಸಚಿವರುಗಳ ಸಮ್ಮುಖದಲ್ಲಿ ಬ್ಯಾಂಕ್ ಉಪಾಧ್ಯಕ್ಷರನ್ನು ಸನ್ಮಾನಿಸುವ ಮೂಲಕ ಕೇಂದ್ರ ಸರ್ಕಾರವು ಬ್ಯಾಂಕ್ನ ಸೇವಾ ಕಾರ್ಯವನ್ನು ಪುರಸ್ಕರಿಸಿದೆ.
ಪಟ್ಟಣ ಸಹಕಾರ ಬ್ಯಾಂಕುಗಳ ರಾಷ್ಟ್ರೀಯ ಮಹಾಮಂಡಲದ ವತಿಯಿಂದ ಜೂನ್ 23ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಗೌರವ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು. ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನ್ನು ಪ್ರತಿನಿಧಿಸಿದ ಉಪಾಧ್ಯಕ್ಷ ವಿಶ್ವಾಸ್ ಶೆಣೈ ಮತ್ತು ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರನ್ನು ಕೇಂದ್ರದ ವಿತ್ತ ಸಹಾಯಕ ಸಚಿವರಾದ ಡಾ. ಭಗವತ್ ಕೆ. ಕರಾಡ್ ಮತ್ತು ಕೇಂದ್ರದ ಸಹಕಾರ ರಾಜ್ಯ ಸಚಿವ ಬಿ ಎಲ್ ವರ್ಮ ಅವರು ಸನ್ಮಾನಿಸಿದರು. ಸಮಾರಂಭವನ್ನು ಕೇಂದ್ರದ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಪೂರ್ವಾಹ್ನ ಉದ್ಘಾಟಿಸಿದ್ದರು.