ನಿವೃತ್ತ ಶಿಕ್ಷಕ, ಸಾಹಿತಿ ನುಳಿಯಾಲು ರಘುನಾಥ ರೈ ನಿಧನ

0

ನಾಳೆ 11 ಗಂಟೆಗೆ ಅಂತ್ಯಕ್ರಿಯೆ
ಮೃತರ ಪಾರ್ಥೀವ ಶರೀರದ ಅಂತ್ಯಕ್ರಿಯೆಯು ಸೆ. 29 ರಂದು ಬೆಳಿಗ್ಗೆ 11 ಗಂಟೆಗೆ ನುಳಿಯಾಲು ಅವರ ಸ್ವಗೃಹದಲ್ಲಿ ನಡೆಯಲಿದೆ ಎಂದು ಅವರ ಬಂಧುಗಳು ತಿಳಿಸಿದ್ದಾರೆ.

ಪುತ್ತೂರು: ನಿವೃತ್ತ ಶಿಕ್ಷಕ, ಸಾಹಿತಿ, ಯಕ್ಷಗಾನ ವೇಷಧಾರಿ, ಅರ್ಥಧಾರಿ ನುಳಿಯಾಲು ರಘುನಾಥ ರೈ (80 ವ.) ರವರು ಅಲ್ಪಕಾಲದ ಅಸೌಖ್ಯದಿಂದ ಸೆ. 28ರಂದು ರಾತ್ರಿ ನುಳಿಯಾಲು ಸ್ವಗೃಹದಲ್ಲಿ ನಿಧನರಾದರು. ಎರಡು ವಾರಗಳಿಂದ ತೀವ್ರತರವಾದ ಅನಾರೋಗ್ಯದಿಂದಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು.

ಸುಳ್ಯಪದವು ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 33 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಹುಮುಖ ಪ್ರತಿಭೆಯಾಗಿದ್ದ ಇವರ ಸೇವೆ ಪರಿಗಣಿಸಿ 1993 ರಲ್ಲಿ ?ಜಿಲ್ಲಾ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ, 2015 ರಲ್ಲಿ ಎನ್.ಎಸ್. ಕಿಲ್ಲೆ ಪ್ರಶಸ್ತಿ ಸೇರಿದಂತೆ ಹಲವು ಪ್ರಸಸ್ತಿ ಸನ್ಮಾನಗಳು ಅವರಿಗೆ ಲಭಿಸಿದ್ದವು.

2018 ರಲ್ಲಿ ಪುತ್ತೂರಿನಲ್ಲಿ ನಡೆದ ಕರ್ನಾಟಕ ಏಕೀಕರಣ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ಚೂರಿಪದವು ಶಾಲೆಯಲ್ಲಿ ನಡೆದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಗಡಿನಾಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ನುಳಿಯಾಲು ತರವಾಡು ಟ್ರಸ್ಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಉತ್ತಮ ವಾಗ್ಮಿಯಾಗಿ ಹಲವು ಕಡೆ ಧಾರ್ಮಿಕ ಮತ್ತು ಸಾಹಿತ್ಯ ಉಪನ್ಯಾಸಗಳನ್ನು ನೀಡಿದ್ದರು.  ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯ ಆಡಳಿತ ಮಂಡಳಿ ಸದಸ್ಯರಾಗಿ, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಯಕ್ಷಗಾನ ಮತ್ತು ಕಾವ್ಯವಾಚನದಲ್ಲೂ ಹೆಸರು ಪಡೆದಿದ್ದರು. ಸ್ವಾತಂತ್ರ‍್ಯ ಹೋರಾಟಗಾರರ ಬದುಕು ಬಗ್ಗೆ ಅನೇಕ ಲೇಖನಗಳನ್ನೂ ಪತ್ರಿಕೆಗಳಿಗೆ ಬರೆದಿದ್ದರು.

ಪತ್ನಿ, ಮುಂಡೂರು ಶಾಲಾ ನಿವೃತ್ತ ಮುಖ್ಯಗುರು ವಾರಿಜಾ ಕೆ. ರೈ, ಪುತ್ರ ಮಂಗಳೂರಿನ ಯೆನಪೋಯ ಡೀಮ್ಡ್ ಯುನಿವರ್ಸಿಟಿಯ ಮೆಡಿಕಲ್ ಸೂಪರಿಂಡೆಂಟ್ ಡಾ. ಸುಭಾಸ್ ರೈ ನುಳಿಯಾಲು, ಸೊಸೆ ಮಂಗಳೂರಿನಲ್ಲಿ ವೈದ್ಯೆಯಾಗಿರುವ ಡಾ. ದೀವಿಕಾ ರೈ, ಪುತ್ರಿ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಸ್ಮಿತಾ ಕೆ.ಎನ್. ರೈ., ಅಳಿಯ ಪುತ್ತೂರಿನ ವಕೀಲರಾದ ಸುರೇಶ್ ರೈ ಪಡ್ಡಂಬೈಲು, ಸಹೋದರ ನಾರಾಯಣ ರೈ ನುಳಿಯಾಲು, ಸಹೋದರಿ ನೇತ್ರಾವತಿ ಶೆಟ್ಟಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here