ಫೆ.9ರಿಂದ ಕುಂಜೂರುಪಂಜ ಇರುವೆರ್ ಉಳ್ಳಾಕುಲು ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ : ಶ್ರೀದುರ್ಗಾ ಭಜನಾ ಮಂದಿರದ ವಾರ್ಷಿಕೋತ್ಸವ, ದೈವಗಳ ನೇಮೋತ್ಸವದ ಸಂಭ್ರಮ

0

ಪುತ್ತೂರು:ಆರ್ಯಾಪು ಗ್ರಾಮದ ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರದ 22ನೇ ವಾರ್ಷಿಕೋತ್ಸವ, ನೂತನವಾಗಿ ನಿರ್ಮಾಣಗೊಂಡ ಗ್ರಾಮ ದೈವ ಇರುವೆರ್ ಉಳ್ಳಾಕುಲು ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವಗಳು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವೇ.ಮೂ ಉದಯನಾರಾಯಣ ಕಲ್ಲೂರಾಯರವರ ಉಪಸ್ಥಿತಿಯಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಕುಂಜೂರುಪಂಜದಲ್ಲಿ ಪುರಾತನ ಕಾಲದಿಂದಲೂ ಆರಾಧಿಸುತ್ತಿದ್ದ ದೈವ ಕ್ಷೇತ್ರದ ಕುರುಹು ಪತ್ತೆಯಾಗಿತ್ತು. ಇದರ ಬಗ್ಗೆ ಅಷ್ಟಮಂಗಳ ಪ್ರಶ್ನಾ ಚಿಂತನೆ ನಡೆಸಿದಾಗ ಇದೊಂದು ಇರುವೆರ್ ಉಳ್ಳಾಕುಲು ದೈವಗಳ ಸಾನಿಧ್ಯವಾಗಿದ್ದು ಇದು ಸುಮಾರು 700 ವರ್ಷಗಳ ಇತಿಹಾವಿರುವುದಾಗಿ ಕಂಡುಬಂದಿದೆ. ಈ ದೈವ ಸಾನಿಧ್ಯವು ಅತ್ಯಂತ ಕಾರಣಿಕ ದೈವ ಸಾನಿಧ್ಯವಾಗಿದೆ ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿತ್ತು. ಪ್ರಶ್ನಾ ಚಂತನೆಯಲ್ಲಿ ಕಂಡು ಬಂದಂತೆ ಊರಿ ಭಕ್ತರು ಸೇರಿಕೊಂಡು ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾ ಕಲಶ ನಡೆಸಿ ದೈವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದು ಇದೀಗ ಭವ್ಯವಾದ ಮಾಡ ನಿರ್ಮಾಣಗೊಂಡು ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.


ಕಾರ್ಯಕ್ರಮಗಳಿಗೆ ಪೂರ್ವಭಾವಿಯಾಗಿ ಫೆ.9ರಂದು ಭಕ್ತಾದಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ವಿವಿಧ ಭಾಗಗಳಿಂದ ಸಂಗ್ರಹಗೊಂಡ ಹಸಿರು ಹೊರೆಕಾಣಿಕೆಯು ದೇವಸ್ಯದಲ್ಲಿ ಜಮಾವಣೆಗೊಂಡು ಅಲ್ಲಿಂದ ಮೆರವಣಿಗೆಯ ಮೂಲಕ ಭಜನಾ ಮಂದಿರದ ಆವರಣಕ್ಕೆ ಆಗಮಿಸಲಿದೆ. ಸಂಜೆ ತಂತ್ರಿಗಳ ಆಗಮನ, ಆಚಾರ್ಯವರಣ, ಸ್ಥಳಶುದ್ಧಿ, ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ಪೂಜಾ ಬಲಿ, ನೂತನ ವಿಂಬ ಜಲಾಧಿವಾಸ, ಪ್ರಾಕಾರ ಬಲಿ, ಸುದರ್ಶನ ಹೋಮ, ಬಾಧಾ ಉಚ್ಚಾಟನೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.


ಫೆ.10ರಂದು ಮುಂಜಾನೆ ಶ್ರೀದುರ್ಗಾ ಭಜನಾ ಮಂದಿರದ 22ನೇ ವಾರ್ಷಿಕೋತ್ಸವದ ಅಂಗವಾಗಿ ಅರ್ಧ ಏಕಾಹ ಭಜನೆ ಪ್ರಾರಂಭಗೊಳ್ಳಲಿದೆ. ನಂತರ 12 ಕಾಯಿ ಮಹಾಗಣಪತಿಹೋಮ, ಬ್ರಹ್ಮಕಲಶಪೂಜೆ, ಇರುವೆರ್ ಉಳ್ಳಾಕುಲು ಬಿಂಬ ಪ್ರತಿಷ್ಠಾ ಕಲಶಾಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಭಜನಾ ವಾರ್ಷಿಕೋತ್ಸವದಲ್ಲಿ ಶ್ರೀಕೃಷ್ಣ ಭಜನಾ ಮಂಡಳಿ ಗುಮ್ಮಟೆಗದ್ದೆ, ಶ್ರೀರಾಮ ಭಜನಾ ಮಂಳಿ ಬೆಳಿಯೂರುಕಟ್ಟೆ, ಶ್ರೀಮಹಿಷಮರ್ದಿನಿ ಭಜನಾ ಮಂಡಳಿ ಆಜೇರು, ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ದೊಡ್ಡಡ್ಕ, ಶ್ರೀರಾಮ ಭಜನಾ ಮಂಡಳಿ ಬಂಗಾರಡ್ಕ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಮೊಟ್ಟೆತ್ತಡ್ಕ, ಶ್ರೀಭಟ್ಟಿ ವಿನಾಯಕ ಭಜನಾ ಮಂಡಳಿ ಬಲ್ನಾಡು, ಶ್ರೀಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಕುಮಾರಮಂಗಳ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ, ವೈದೇಹಿ-ವೈಷ್ಣವೀ ಭಜನಾ ಮಂಡಳಿ ಬೊಳುವಾರು, ಶ್ರೀಅಯ್ಯಪ್ಪ ಭಜನಾ ಮಂಡಳಿ ರೆಂಜ ಹಾಗೂ ಶ್ರೀ ಆಂಜನೇಯ ಭಜನಾ ಮಂಡಳಿ ಬೊಳ್ಳಾಣ ಅರ್ಧ ಏಕಾಹ ಭಜನೆಯಲ್ಲಿ ಸಹಕರಿಸಲಿದ್ದಾರೆ.


ಸಂಜೆ ಅರ್ಧಏಕಾಹ ಭಜನೆಯ ಮಂಗಳೋತ್ಸವ, ಮಂಗಳಾರತಿ ನಡೆಯಲಿದೆ. ನಂತರ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಟ್ಟಣ್ಣ ರೈ ಕಲ್ಕೋಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಬೆಂಗಳೂರಿನ ಉದ್ಯಮಿ ಸತೀಶ್ ರೈ ಮಿಶನ್‌ಮೂಲೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ಎಂ. ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಡಾ.ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವೀಂದ್ರನಾಥ ಕಲ್ಲೂರಾಯ, ಶ್ರೀದುರ್ಗಾ ಸೇವಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ ಗೆಣಸಿನಕುಮೇರು ಉಪಸ್ಥಿತರಿರಲಿದ್ದಾರೆ.


ಫೆ.11ರಂದು ಇರುವೆರ್ ಉಳ್ಳಾಕುಲು ದೈವಗಳ ನೇಮೋತ್ಸವ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ ಎಂದು ಶ್ರೀದುರ್ಗಾ ಸೇವಾ ಸಮಿತಿ, ಇರುವೆರ್ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here