ಆಲಂಕಾರು: ಬುಡೇರಿಯಾ ಶ್ರೀ ದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ಹಾಗೂ ಪರಿವಾರ ದೈವಗಳಿಗೆ ವಿಶೇಷ ತಂಬಿಲ, ಶನೈಶ್ಚರ ಕಲ್ಪೋಕ್ತ ಪೂಜೆ, ಆಶ್ಲೇಷ ಬಲಿ ಮತ್ತು ರಂಗ ಪೂಜೆ ಫೆ.7ರಂದು ಬ್ರಹ್ಮಶ್ರೀ ವೇ.ಮೂ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ರವರ ನೇತೃತ್ವದಲ್ಲಿ ಬೆಳಿಗ್ಗೆ 7ರಿಂದ ಸ್ವಸ್ತಿ ಪುಣ್ಯಹವಾಚನ, ಗಣಪತಿ ಹೋಮ, ನವಗ್ರಹಶಾಂತಿ ಸಹಿತ ಶನಿ ಶಾಂತಿ ಹೋಮ, ಶನೈಶ್ಚರ ಕಲ್ಪೋಕ್ತ ಪೂಜೆ, ನಾಗದೇವರಿಗೆ ನವಕ ಕಲಶಾಭಿಷೇಕ, ನಾಗರಾಜ ಕಲ್ಪೋಕ್ತ ಪೂಜೆ, ದೈವಗಳಿಗೆ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ತಂಬಿಲ ನಡೆದು ಶನಿಶಾಂತಿಯ ಪೂರ್ಣಾಹುತಿ, ಮಹಾಮಂಗಳಾರತಿ, ಶ್ರೀದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ಹಾಗೂ ಪರಿವಾರ ದೈವಗಳಿಗೆ ವಿಶೇಷ ತಂಬಿಲ, ಪ್ರಸಾದ ವಿತರಣೆ, ಮಕ್ಕಳಿಂದ,ಭಜನೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ,ದುರ್ಗಾಂಬಾ ಪದವಿ ಪೂರ್ವ ಕಾಲೇಜ್ ಆಲಂಕಾರು, ದ.ಕ.ಜಿ.ಪ ಹಿರಿಯ ಪ್ರಾಥಮಿಕ ಆಲಂಕಾರು ಶಾಲೆಯ ಕ್ರೀಡೆ ಹಾಗು ಶೈಕ್ಷಣಿಕ ಕ್ಷೇತ್ರಗಳಲ್ಲಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿ,ವಿದ್ಯಾರ್ಥಿನಿಯರನ್ನು ಹಾಗೂ ತರಬೇತುದಾರರಾದ ಶ್ರೇಯಸ್ ರೈ,ಚಂದ್ರಹಾಸ ಕೆ.ಸಿ ಯವರನ್ನು ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ಬಳ್ಳಕ್ಕುರಾಯ ರವರು ಗೌರವಿಸಿ ಸನ್ಮಾನಿಸಿದರು.
ಸಂಜೆ ರಂಗಪೂಜೆ ಸಂಕಲ್ಪ, ಆಶ್ಲೇಷ ಬಲಿ, ಶ್ರೀದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ದೈವಗಳಿಗೆ ರಂಗಪೂಜೆ ನಡೆದು, ಅನ್ನಪ್ರಸಾದ ಭೋಜನ ನಡೆಯಿತು.
ಆಗಮಿಸಿದ ಭಕ್ತಾದಿಗಳು ಪ್ರಸಾದ ಸ್ವೀಕರಿಸಿ,ಶನೈಶ್ಚರ ಪೂಜೆ, ರಂಗಪೂಜೆ ಹಾಗು ಇನ್ನೀತರ ಸೇವೆ ಸಲ್ಲಿಸಿ ಅನ್ನಸಂತರ್ಪಣೆ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಸಂಕಪ್ಪ ಗೌಡ ಗೌಡತ್ತಿಗೆ, ಸೂರಪ್ಪ ಪೂಜಾರಿ ಹೊಸಮಜಲು, ಅರ್ಚಕರಾದ ಅನಂತರಾಮ ಭಟ್ ತೋಟಂತಿಲ ಹಾಗು ಕಾರ್ಯಕರ್ತರು ಸಹಕರಿಸಿದರು.