ಬೆಳ್ತಂಗಡಿ: 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಕಾಂಕ್ಷೆ ಉಳ್ಳವರು ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚಿಸಿದ್ದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದಲೂ ಹಲವಾರು ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ ರೂ. 5 ಸಾವಿರ ಅರ್ಜಿ ಶುಲ್ಕ ಪಾವತಿಸಿ ರೂ. 2 ಲಕ್ಷ ಡಿ.ಡಿಯನ್ನು ಕೆಪಿಸಿಸಿಗೆ ನೀಡಬೇಕಾಗಿದೆ.
ಅಭ್ಯರ್ಥಿಯಾಗಲು ಬಯಸಿ ಅರ್ಜಿ ಸಲ್ಲಿಸುವವರು ಕೆಪಿಸಿಸಿಯ ಷರತಿಗೆ ಬದ್ಧರಾಗಬೇಕಾಗಿದೆ. ಅಂತಿಮವಾಗಿ ಚುನಾವಣೆ ಯಾವುದೇ ಅಭ್ಯರ್ಥಿಯನ್ನು ಪಕ್ಷ ಅಂತಿಮಗೊಳಿಸಿದರೂ ಯಾವುದೇ ಬಂಡಾಯಕ್ಕೆ ಅವಕಾಶ ನೀಡದೆ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂಬ ಷರತ್ತಿಗೆ ಒಪ್ಪಿಕೊಂಡು ಈಗಾಗಲೇ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ಮೂರು ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಐದು ಬಾರಿ ಶಾಸಕರಾಗಿ, ಮುಖ್ಯ ಸಚೇತಕರಾಗಿದ್ದ ಮಾಜಿ ಶಾಸಕ ಕೆ. ವಸಂತ ಬಂಗೇರ, ಮಾಜಿ ಶಾಸಕರಾಗಿ, ಕ್ರೀಡಾ ಮತ್ತು ಯುವ ಜನ ಇಲಾಖೆ ಮಾಜಿ ಸಚಿವರಾದ ಕೆ. ಗಂಗಾಧರ ಗೌಡ ಮತ್ತು ಕೆಪಿಸಿಸಿ ಕಾರ್ಯದರ್ಶಿ ಬೆಳ್ತಂಗಡಿಯ ಬೆಸ್ಟ್ ಪೌಂಡೇಶನ್ನ ಸಂಚಾಲಕ ರಕ್ಷಿತ್ ಶಿವರಾಮ್ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.