ಉಜಿರೆ :ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ| ಪಿ.ಎಸ್. ಉದಯಚಂದ್ರ ಅವರನ್ನು ವಾಣಿಜ್ಯ ಶಾಸ್ತ್ರ ವಿಭಾಗದ ಅಭಿಮಾನಿ ಹಳೇ ವಿದ್ಯಾರ್ಥಿಗಳ ಸಹಯೋಗದಲ್ಲಿ ನ.13 ರಂದುಮಂಗಳೂರು ನಗರದ ಓಶಿಯನ್ ಪರ್ಲ್ ಹೋಟೆಲ್ನಲ್ಲಿ ಆಯೋಜಿಸಲಾದ ‘ಉದಯಾಭಿನಂದನಾ’ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಪಿ.ಎಸ್. ಉದಯಚಂದ್ರ ಅವರು, ವಿದ್ಯಾರ್ಥಿಗಳನ್ನು ಶ್ಲಾಘಿಸಿ, ತನ್ನಿಂದ ವಿದ್ಯೆ ಕಲಿತ ವಿದ್ಯಾರ್ಥಿಗಳು ಜೀವನದಲ್ಲಿ ಸಾರ್ಥಕತೆ ಕಾಣುವುದು ಸಂತೃಪ್ತಿ ತಂದಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಉದಯಚಂದ್ರ ಅವರು ಮಾತನಾಡಿ, ಉದಯಚಂದ್ರ ಅವರ ಮೇಲೆ ವಿದ್ಯಾರ್ಥಿಗಳು ಇಟ್ಟಿರುವ ಅಭಿಮಾನ ದೊಡ್ಡ ಕೊಡುಗೆ ಎಂದರು.
ಹಳೇ ವಿದ್ಯಾರ್ಥಿಗಳಾದ ರತ್ನಾಕರ್, ಶೇಖ್ ಲತೀಫ್, ಧನಂಜಯ ರಾವ್, ಉಜ್ವಲಾ, ಕೃಷ್ಣಮೂರ್ತಿ, ಶ್ರದ್ಧಾ ಶೆಟ್ಟಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಪುಸ್ತಕದ ಪಾಠಕ್ಕಿಂತ ಹೆಚ್ಚಾಗಿ ಜೀವನದ ಪಾಠ ಕಲಿಸಿ ಜೀವನದಲ್ಲಿ ಎತ್ತರಕ್ಕೆ ಬೆಳೆಯುವಂತೆ ಮಾಡಿದ ಗುರುಗಳು ಡಾ| ಪಿ.ಎಸ್. ಉದಯಚಂದ್ರ ಎಂದರು.
ಹಿರಿಯ ಹಳೇ ವಿದ್ಯಾರ್ಥಿ ವಸಂತ ರೈ ಅಧ್ಯಕ್ಷತೆ ವಹಿಸಿದ್ದರು. ಕಿರಿಯ ವಿದ್ಯಾರ್ಥಿನಿ ಆಶ್ವಿನಿ ಮುಖ್ಯ ಅತಿಥಿಯಾಗಿದ್ದರು.
ಮುರಳೀಧರ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಗದೀಶ್ ಪ್ರಾರ್ಥಿಸಿದರು. ಪರಮೇಶ್ವರ ಅಭಿನಂದನಾ ಪತ್ರ ವಾಚಿಸಿದರು. ಆನಂದ್ ಕೆ. ಕಾರ್ಯಕ್ರಮ ನಿರೂಪಿಸಿದರು. ಸುಬ್ಬರಾಮ್ ವಂದಿಸಿದರು.