ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ಸಂಘೋತ್ಸವ

0

ಬೆಳ್ತಂಗಡಿ: ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಆಗುವುದರ ಜೊತೆಗೆ ತಮ್ಮನ್ನು ತಾವು ಸಮಾಜದ ಅಭಿವೃದ್ಧಿಗೆ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಡಿ.ಕೆ.ಆರ್. ಡಿ.ಎಸ್ ಸಂಸ್ಥೆಯ ಪಾತ್ರ ಹಿರಿದು ಎಂದು ತೋಟತ್ತಾಡಿ ಸಂತ ಅಂತೋನಿ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂ. ಫಾ. ಜಿನ್ಸ್ ವಲಿಯಪರಂಬಿಲ್ ಅಭಿಪ್ರಾಯಪಟ್ಟರು. ಅವರು ನ. 15 ರಂದು ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಬೆಳ್ತಂಗಡಿ ಹಾಗೂ ಉದಯ ಮಹಾ ಸಂಘ ಗಂಡಿಬಾಗಿಲು ಇವುಗಳ ಸಹಭಾಗಿತ್ವದಲ್ಲಿ ಗಂಡಿಬಾಗಿಲಿನ ಸಂತ ತೋಮಸ್ ಚರ್ಚ್ ಸಭಾಭವನದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸ್ವ- ಸಹಾಯ ಸಂಘಗಳ ಸದಸ್ಯರಿಗೆ ಆಯೋಜಿಸಿದ ಸಂಘೋತ್ಸವ- 2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ. ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿದ ಉದ್ದೇಶದ ಬಗ್ಗೆ ವಿವರಿಸಿದರು. ಗಂಡಿಬಾಗಿಲು ಉದಯ ಮಹಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸೆಲಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಹೊರಾಂಗಣ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ಗಂಡಿಬಾಗಿಲು ಸಂತ ತೋಮಸ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಮ್ಯಾಥ್ಯೂ ವೆಟ್ಟಂತ್ತಡತ್ತಿಲ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ದೇವಗಿರಿ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಸಿರಿಲ್, ಕಾನ್ವೆಂಟಿನ ಧರ್ಮ ಭಗಿನಿಯರಾದ ಸಿಸ್ಟರ್ ಆನ್ಸಿ, ಚರ್ಚಿನ ಟ್ರಸ್ಟಿ ಶ್ರೀ. ಸೆಬಾಸ್ಟಿಯನ್ ಎಂ. ಜೆ., ಬೆಳ್ತಂಗಡಿ ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಇದರ ಅಧ್ಯಕ್ಷರಾದ ಶ್ರೀಮತಿ ಏಲಿಯಮ್ಮ ತೋಮಸ್, ಸ್ನೇಹ ಕಿರಣ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಜೋನ್ ಹಾಗೂ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಆಲೀಸ್ ಆಗಸ್ಟಿನ್ ಉಪಸ್ಥಿತರಿದ್ದರು.

ಡಿ.ಕೆ.ಆರ್.ಡಿ ಎಸ್ ಸಂಸ್ಥೆಯ ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕಿಯಾದ ಶ್ರೀಮತಿ ಸಿಸಿಲಿಯಾ ತಾವ್ರೋ ಕಾರ್ಯಕ್ರಮ ನಿರೂಪಿಸಿದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಿಬ್ಬಂದಿ ವರ್ಗ, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ದುಡಿದು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here