ನೆಲ್ಯಾಡಿ: ಜೀರ್ಣೋದ್ಧಾರಗೊಂಡ ಕಡಬ ತಾಲೂಕು ಶಿರಾಡಿ ಗ್ರಾಮದ ಕಳಪ್ಪಾರು ಮೂಲಸ್ಥಾನ ಶ್ರೀ ಶಿರಾಡಿ, ರುದ್ರಾಂಡಿ ಹಾಗೂ ಪರಿವಾರ ದೈವಗಳ ಮಾಲ್ಯ ಚಾವಡಿಯ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಲುವಾಗಿ ಜ.25ರಂದು ಸಂಜೆ ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಶಿರಾಡಿ ಗ್ರಾಮಸ್ಥರು ಅಡಿಕೆ,ತೆಂಗು, ಬಾಳೆಗೊನೆ, ಸಿಯಾಳ ಸೇರಿದಂತೆ ತಾವು ಬೆಳೆದ ವಿವಿಧ ಫಲವಸ್ತುಗಳನ್ನು ದೈವಸ್ಥಾನಕ್ಕೆ ಸಮರ್ಪಿಸಿದರು. ಕಳಪ್ಪಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಿಂದ ಪೂರ್ಣಕುಂಭ ಸ್ವಾಗತ, ಚೆಂಡೆ ವಾದ್ಯದೊಂದಿಗೆ ಹೊರೆಕಾಣಿಕೆ ಮೆರವಣಿಗೆಯೂ ದೈವಸ್ಥಾನಕ್ಕೆ ಆಗಮಿಸಿತು. ಅರ್ಚಕ ಪ್ರಶಾಂತ್ ಪುಣ್ಚಿತ್ತಾಯ, ದೈವಸ್ಥಾನದ ಅನುವಂಶಿಕ ಮೊಕ್ತೇಸರ ಬಾಲಕೃಷ್ಣ ಗೌಡ ಕೆ.ಸಿ., ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಉಪಾಧ್ಯಕ್ಷರಾದ ಲೋಕಯ್ಯ ಗೌಡ ಕುದ್ಕೋಳಿ, ಮಧುಕುಮಾರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಗೌಡ ಕುದ್ಕೋಳಿ, ಖಜಾಂಜಿ ಸುಬ್ರಹ್ಮಣ್ಯ ತೋಡ್ತಿಲ್ಲಾಯ, ಆಡಳಿತ ಸಮಿತಿ ಅಧ್ಯಕ್ಷ ಡೊಂಬಯ್ಯ ಗೌಡ ಕೆ., ಉಪಾಧ್ಯಕ್ಷ ಡಿ.ಆರ್.ನಾರಾಯಣ ಗೌಡ ಶಿರಾಡಿ, ಪ್ರಧಾನ ಕಾರ್ಯದರ್ಶಿ ಧನಂಜಯ ಗೌಡ ಬರಮೇಲು, ಉತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪಿ.ಎನ್.ಪೆಲತ್ತಡಿ, ಪ್ರದಾನ ಕಾಪ ನಾರಾಯಣ ಕಾಪ ಸೇರಿದಂತೆ ಕಳಪ್ಪಾರು ಗುತ್ತು ಮತ್ತು ನಾಲ್ವೆಕಿಯವರು ಹಾಗೂ ಪರಿಚಾರಕರು, ವಿವಿಧ ಸಮಿತಿಗಳ ಸದಸ್ಯರು, ಗ್ರಾಮಸ್ಥರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಕ್ಷೇತ್ರದ ತಂತ್ರಿಗಳಾದ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಪ್ರಾಸಾದ ಪರಿಗ್ರಹ, ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾ ಬಲಿ, ಅನ್ನಸಂತರ್ಪಣೆ ನಡೆಯಿತು.
ಇಂದು ಪ್ರತಿಷ್ಠೆ:
ಜ.26ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಆಶ್ಲೇಷ ಬಲಿ, ಬ್ರಹ್ಮಕಲಶ ಪೂಜೆ ನಡೆದು 8.29ರ ನಂತರ 9.14ರ ಕುಂಭ ಲಗ್ನ ಮುಹೂರ್ತದಲ್ಲಿ ಶಿರಾಡಿ ದೈವ, ರುದ್ರಾಂಡಿ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.