ಪುತ್ತೂರು: ಉಡುಪಿ ಮತ್ತು ಕುಂದಾಪುರ ಸರಕಾರಿ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ನಡೆಯನ್ನು ಖಂಡಿಸಿ ಪುತ್ತೂರು ಮುಸ್ಲಿಂ ಮಹಿಳಾ ಒಕ್ಕೂಟದ ವತಿಯಿಂದ ಫೆ.7ರಂದು ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಫ್ಐ ರಾಜ್ಯ ಸಮಿತಿ ಸದಸ್ಯೆ ಮಿಶ್ರೀಯಾ ಮಾತನಾಡಿ, ಪ್ರಧಾನಿಯಾಗಿ ಮನಮೋಹನ ಸಿಂಗ್ ಅವರ ಧರ್ಮದ ಪೇಟ ಧರಿಸಿಕೊಂಡೇ ಆಡಳಿತ ನಡೆಸಿದ್ದಾರೆ. ಪ್ರತಿಭಾ ಪಾಟೀಲ್ ತಲೆ ಹೊದಿಕೆ ಹಾಕಿಕೊಂಡೇ ಆಡಳಿತ ನಡೆಸಿರುವಾಗ ಅವರಿಗೆ ಇಡೀ ರಾಷ್ಟ್ರವೇ ತಲೆಬಾಗಿದೆ. ಆದರೆ ಮುಸ್ಲಿಂ ಮಹಿಳೆಯರು ಮಾತ್ರ ಹಿಜಾಬ್ ಧರಿಸಿದರೆ ದೌರ್ಜನ್ಯವೇಕೆ ಎಂದು ಪ್ರಶ್ನಿಸಿದರು. ವೈವಿದ್ಯತೆಯಲ್ಲಿ ಏಕತೆಯನ್ನು ಕಂಡಿರುವ ಭಾರತದಲ್ಲಿ ಧರ್ಮದ ವಿಚಾರದಲ್ಲಿ ಮುಸ್ಲಿಂ ಮಹಿಳೆಯರು ಎಲ್ಲಾ ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹಿಜಾಬ್ ನಮ್ಮ ಘನತೆ. ಅದು ಧರ್ಮದ ಹಕ್ಕು. ನಾವು ಹಿಜಾಬ್ ಧರಿಸಿದ ಬಳಿಕ ಹಿಂದುಗಳಿಗೆ ಧರ್ಮದ ನೆನಪಾಗಿದ್ದು ಕೇಸರಿ ಶಾಲು ಧರಿಸುತ್ತಿದ್ದಾರೆ. ಹಿಜಾಬ್ ಧರಿಸುವುದು ನಮ್ಮ ಘನತೆಯ ಸಂಕೇತ. ವಿವಾದಕ್ಕಾಗಿ ಧರಿಸುತ್ತಿಲ್ಲ. ನಮ್ಮ ಅಸ್ತತ್ವಕ್ಕೆ ಧಕ್ಕೆ ಬಂದರೆ ಶಾಹಿನ್ ಬಾಗ್ ರೀತಿಯಲ್ಲಿ ಕ್ರಾಂತಿ ನಡೆಸುವುದಾಗಿ ಅವರು ಎಚ್ಚರಿಸಿದರು.
ನಗರ ಸಭಾ ಸದಸ್ಯೆ ಫಾತಿಮತ್ ಝೊಹರಾ, ಮುಸ್ಲಿಂ ಮಹಿಳಾ ಒಕ್ಕೂಟಗಳ ಸಂಚಾಲಕಿ ಶಹನಾಝ್, ಸಾಬಿರಾ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.