ಉಪ್ಪಿನಂಗಡಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ರಥೋತ್ಸವ ಸಂಭ್ರಮದ ಓಕುಳಿ ಮೆರವಣಿಗೆಯ ವೇಳೆಯಲ್ಲಿ ಜಿ.ಎಸ್.ಬಿ. ಸಮಾಜ ಬಾಂಧವರು ಕುಣಿತ, ನರ್ತನ ನಿಲ್ಲಿಸಿ ಮುಸ್ಲಿಂ ವ್ಯಕ್ತಿಯ ಶವ ಯಾತ್ರೆಗೆ ಗೌರವ ಸಲ್ಲಿಸಿ ಸೌಹಾರ್ದತೆ ಮೆರೆದ ಘಟನೆ ನಡೆದಿದೆ.
ಉಪ್ಪಿನಂಗಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ರಥೋತ್ಸವದ ಸಲುವಾಗಿ ಫೆ.11ರಂದು ಓಕುಳಿ ಸಡಗರದಲ್ಲಿ ಜಿ.ಎಸ್.ಬಿ. ಸಮಾಜ ಬಾಂಧವರು ಬ್ಯಾಂಡ್, ವಾದ್ಯದೊಂದಿಗೆ ಪರಸ್ಪರ ಬಣ್ಣದ ನೀರು ಎರಚಿಕೊಂಡು ಮೆರವಣಿಗೆಯಲ್ಲಿ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಇದೇ ಹಾದಿಯಾಗಿ ಗುರುವಾರ ರಾತ್ರಿ ನಿಧನ ಹೊಂದಿದ್ದ ಉಪ್ಪಿನಂಗಡಿಯ ಜವುಳಿ ಉದ್ಯಮಿ ಮೈನಾ ಕ್ಲಾತ್ ಸ್ಟೋರ್ ಮಾಲಕ ಹಸನಬ್ಬ ಹಾಜಿಯವರ ಶವ ಯಾತ್ರೆ ಬರುವುದನ್ನು ಗಮನಿಸಿ, ಓಕುಳಿ ಸಂಭ್ರಮದಲ್ಲಿದ್ದವರು ಬ್ಯಾಂಡ್ ವಾದ್ಯ, ಕುಣಿತವನ್ನು ಸ್ಥಗಿತಗೊಳಿಸಿ, ರಸ್ತೆ ಬದಿಯಲ್ಲಿ ನಿಂತು ಶವ ಯಾತ್ರೆಗೆ ಗೌರವ ಸಲ್ಲಿಸುವ ಮೂಲಕ ಸೌಹಾರ್ದತೆ ಮೆರೆದರು. ಈ ಮೂಲಕ ಉಪ್ಪಿನಂಗಡಿಯಲ್ಲಿ ಸೌಹಾರ್ದತೆ ಇನ್ನೂ ಜೀವಂತವಾಗಿದೆ ಎನ್ನುವುದನ್ನು ತೋರಿಸಿಕೊಟ್ಟರು. ಈ ಬೆಳವಣಿಗೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.