ಸುಳ್ಯದಲ್ಲಿ ಸುದ್ದಿ ಗ್ರಾಮೋತ್ಸವ ನಡೆಸಲು ನಿರ್ಧಾರ – ಪ್ರಥಮ ಹಂತದಲ್ಲಿ 11 ಕಡೆಗಳಲ್ಲಿ ಗ್ರಾಮೋತ್ಸವ

0

  • ಸಾರ್ವಜನಿಕರಿಂದ ಸಲಹೆ ಸೂಚನೆಗಳಿಗೆ ಆಹ್ವಾನ

ಪುತ್ತೂರು:ನಿರಂತರವಾಗಿ ಜನಮುಖಿಯಾದ ಧೋರಣೆಯೊಂದಿಗೆ ಜನಪರವಾದ ನಿಲುವಿನೊಂದಿಗೆ ಕಾರ್ಯಾಚರಿಸುತ್ತಿರುವ ಸುದ್ದಿ ಸಂಸ್ಥೆ ಕಾಲಕಾಲಕ್ಕೆ ಸಮಾಜಕ್ಕೆ ಬೆಳಕು ಚೆಲ್ಲುವಂತೆ ಅನೇಕ ಕಾರ್ಯಕ್ರಮ ಮತ್ತು ಆಂದೋಲನಗಳ ಮೂಲಕ ಜನರಿಗೆ ಹತ್ತಿರವಾಗಿದೆ. ಸುದ್ದಿ ನೇತೃತ್ವದಲ್ಲಿ ನಡೆದ ಎಲ್ಲಾ ಯೋಜನೆ ಮತ್ತು ಆಂದೋಲನಗಳಿಗೆ ಜನರಿಂದ ಅಭೂತಪೂರ್ವ ಸ್ವಾಗತ ಮತ್ತು ಬೆಂಬಲ ದೊರೆತಿದೆ. ಸುದ್ದಿ ಜನಾಂದೋಲನ ವೇದಿಕೆಯ ವತಿಯಿಂದ ಈಗ ನಡೆಯುತ್ತಿರುವ ಲಂಚ, ಭ್ರಷ್ಟಾಚಾರ ವಿರೋಧಿ ಆಂದೋಲನವಂತೂ ಸಮಾಜದಲ್ಲಿ ಕ್ರಾಂತಿಯ ಅಲೆಯನ್ನೇ ಎಬ್ಬಿಸಿದೆ.

ಸುದ್ದಿ ಸಮೂಹ ಸಂಸ್ಥೆ ಈ ಹಿಂದಿನ ವರ್ಷಗಳಲ್ಲಿ ಅನುಷ್ಠಾನಕ್ಕೆ ತಂದ ಗ್ರಾಮೋತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ಮರಳಿ ಆಯೋಜಿಸಲು ಚಿಂತನೆ ನಡೆಸಿದ್ದು, ಅದಕ್ಕಾಗಿ ಸಿದ್ಧತೆ ಆರಂಭಿಸಿದೆ. ಬದಲಾದ ಬದುಕಿನಲ್ಲಿ ಅನಿವಾರ್ಯವಾದ ಕಾರ್ಯಕ್ರಮಗಳ ಅನುಷ್ಠಾನದೊಂದಿಗೆ ಈ ಕಾರ್ಯಕ್ರಮ ಮೂಡಿ ಬರಲಿದೆ.

ಈ ಹಿಂದಿನ ವರ್ಷಗಳಲ್ಲಿ ಉಬರಡ್ಕ, ಕಳಂಜ ಹಾಗೂ ಬಾಳಿಲಗಳಲ್ಲಿ ನಡೆದ ಗ್ರಾಮೋತ್ಸವಗಳ ಯಶಸ್ಸನ್ನು ಮತ್ತು ಜನರ ಸಹಭಾಗಿತ್ವವನ್ನು ಮನದಲ್ಲಿರಿಸಿ ಅದೇ ಯೋಚನೆಯೊಂದಿಗೆ ಈ ಬಾರಿಯೂ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಸಮುದಾಯದವರೂ ಒಟ್ಟು ಸೇರಿ ನಡೆಸುವ ಈ ಕಾರ್ಯಕ್ರಮ ಜನರ ಉತ್ಸವವಾಗಬೇಕೆಂಬುದು ಸುದ್ದಿಯ ಬಯಕೆ. ಜನರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸುದ್ದಿ ಸಮೂಹ ಮಾಧ್ಯಮ ಸಂಪೂರ್ಣ ಸಹಕಾರ ನೀಡಲಿದೆ.

ಪ್ರಥಮ ಹಂತದಲ್ಲಿ ಅರಂತೋಡು, ಐವರ್ನಾಡು, ಮಂಡೆಕೋಲು, ಜಾಲ್ಸೂರು, ಮರ್ಕಂಜ, ಸುಬ್ರಹ್ಮಣ್ಯ, ಅಮರಮುಡ್ನೂರು, ಬಾಳಿಲ ಮತ್ತು ಸುಳ್ಯ ನಗರದ ಜಯನಗರ, ಜಟ್ಟಿಪಳ್ಳ ಹಾಗೂ ದುಗ್ಗಲಡ್ಕ ವಾರ್ಡ್‌ಗಳಲ್ಲಿ ಈ ಕಾರ್ಯಕ್ರಮ ಆಯೋಜನೆಗೆ ಚಿಂತನೆ ನಡೆಸಲಾಗಿದೆ. ಆಯಾ ಊರುಗಳಲ್ಲಿರುವ ಎಲ್ಲ ಸಂಘ-ಸಂಸ್ಥೆಗಳ ಭಾಗಿದಾರಿಕೆಯೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಇದಲ್ಲದೇ ಗ್ರಾಮಸ್ಥರಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಗ್ರಾಮಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಲಾಗುವುದು. ಉತ್ತಮ ಸೇವೆ ನೀಡಿದ ಇಲಾಖಾ ಸಿಬ್ಬಂದಿಗಳನ್ನು ಗೌರವಿಸಲಾಗುವುದು. ವಿವಿಧ ಡಿಜಿಟಲ್ ಯೋಜನೆಗಳ ಮಾಹಿತಿ ಮತ್ತು ಅನುಷ್ಠಾನ ಮಾಡಲಾಗುವುದು. ಜನರಿಗೆ ಬೇಕಾದ ವಿವಿಧ ಮಾಹಿತಿ ಪ್ರದರ್ಶನ ನಡೆಸಲಾಗುವುದು. ಗ್ರಾಮದ ಕೃಷಿ, ಉದ್ಯಿಮೆ, ವಿವಿಧ ಕಸುಬು ಸೇರಿದಂತೆ ಧಾರ್ಮಿಕ, ಶೈಕ್ಷಣಿಕ, ಇತರ ಎಲ್ಲಾ ರಂಗಗಳ ಮಾಹಿತಿಯ ಪ್ರದರ್ಶನ ಮಾಡಲಾಗುವುದು. ಉಚಿತ ಆರೋಗ್ಯ ಶಿಬಿರ, ಸರ್ಕಾರಿ ಯೋಜನೆಗಳ ಮಾಹಿತಿ, ಖಾಸಗಿ ಕಂಪೆನಿಗಳ ಮಾಹಿತಿ ನೀಡಲಾಗುವುದು. ಪರವೂರಿನಲ್ಲಿರುವ ಗ್ರಾಮಸ್ಥರನ್ನು ಸಂಪರ್ಕಿಸಿ ಅವರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ಇದಲ್ಲದೇ, ಊರಿನ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗುವುದು. ಒಟ್ಟಿನಲ್ಲಿ ದಿನಪೂರ್ತಿ ಗ್ರಾಮಸ್ಥರು ಎಲ್ಲ ಭೇದ ಮರೆತು ಉತ್ಸವದ ರೂಪದಲ್ಲಿ ಪಾಲ್ಗೊಂಡು ಖುಷಿ ಪಡೆಯಬೇಕೆಂಬುದು ಸುದ್ದಿಯ ಬಯಕೆ. ಗ್ರಾಮೋತ್ಸವಕ್ಕೆ ಪೂರ್ವಭಾವಿಯಾಗಿ ಗ್ರಾಮದ ಸಂಪೂರ್ಣ ಚಿತ್ರೀಕರಣ ನಡೆಸಿ, ದಾಖಲಿಸಿ ಅವುಗಳನ್ನು ಗ್ರಾಮೋತ್ಸವದ ಸಂದರ್ಭದಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗುವುದು. ಮಾತ್ರವಲ್ಲದೇ ಲಂಚ, ಭ್ರಷ್ಟಾಚಾರ ವಿರೋಧಿ ಮನೋಭಾವನೆ ಮೂಡಿಸಲು ಮತ್ತು ಊರನ್ನು ಲಂಚ, ಭ್ರಷ್ಟಾಚಾರ ಮುಕ್ತಗೊಳಿಸಲು ಜನಜಾಗೃತಿ ಮತ್ತು ಪ್ರತಿಜ್ಞಾ ವಿಽ ಕಾರ್ಯಕ್ರಮ ನಡೆಸಲಾಗುವುದು. ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿಯೂ ಇದೇ ರೀತಿ ಗ್ರಾಮೋತ್ಸವ ನಡೆಸಲು ನಿರ್ಧರಿಸಲಾಗಿದೆ.

ಇದಲ್ಲದೇ 75ನೇ ವರ್ಷ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಾಲೂಕಿನ 3 ಗ್ರಾಮಗಳನ್ನು ಅಭಿವೃದ್ಧಿ ಚಿಂತನೆಗಾಗಿ ದತ್ತು ಪಡೆಯಲು ಕೂಡಾ ಸುದ್ದಿ ನಿರ್ಧರಿಸಿದೆ. ಸರ್ಕಾರದ, ಸಚಿವರ, ಶಾಸಕರ, ಅಧಿಕಾರಿಗಳ ಸಹಕಾರ ಪಡೆದು ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಯೋಜನೆಗಳ ಮಾಹಿತಿ ಸಂಗ್ರಹಿಸಿ ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸುದ್ದಿ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಲಂಚ, ಭ್ರಷ್ಟಾಚಾರ ವಿರುದ್ಧದ ಆಂದೋಲನ ಪ್ರಮುಖ ಪಾತ್ರವಹಿಸಲಿದೆ. ಈ ನಿಟ್ಟಿನಲ್ಲಿ ಗ್ರಾಮೋತ್ಸವ ಹಾಗೂ ದತ್ತು ಯೋಜನೆಗೆ ಜನರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಲಾಗಿದೆ.

LEAVE A REPLY

Please enter your comment!
Please enter your name here