- ವಾಸ್ತವ ಸ್ಥಿತಿ ಅರಿಯಲು ಸಭೆ – ಶಾಸಕರ ಪ್ರಶ್ನೆಗೆ ಆರೋಗ್ಯ ಸಚಿವರ ಉತ್ತರ
- ಅಧಿವೇಶನದಲ್ಲಿ ಶಾಸಕ ಸಂಜೀವ ಮಠಂದೂರು ಪ್ರಶ್ನೆ
ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯನ್ನು ತಾಯಿ ಮಗುವಿನ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಬೇಕಾದರೆ ಸರಕಾರದ ಮಟ್ಟದಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ. ಆದರೆ ವಾಸ್ತವ ಸ್ಥಿತಿ ಅರಿಯಲು ಪುತ್ತೂರಿನಲ್ಲೇ ಸಭೆ ಮಾಡುವುದಾಗಿ ರಾಜ್ಯದ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಸದನದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಬೆಂಗಳೂರು ವಿಧಾನ ಅಧಿವೇಶನದಲ್ಲಿ ಪ್ರಶ್ನೋ ತ್ತರ ವೇಳೆಯಲ್ಲಿ ಸಚಿವ ಸುಧಾಕರ್ ಅವರು ನೀಡಿದ ಉತ್ತರಕ್ಕೆ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಮೇಲ್ದದರ್ಜೆಗೆ ಏರಿಸುವ ವಿಚಾರದಲ್ಲಿ ವಾಸ್ತವಿಕ ವಿಚಾರಕ್ಕೆ ವಿರುದ್ಧವಾಗಿ ನಿಮ್ಮಿಂದ ಉತ್ತರ ಬಂದಿದೆ. ಪುತ್ತೂರು ಉಪವಿಭಾಗದ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷದಲ್ಲಿ ಸುಮಾರು ಎರಡೂವರೆ ಲಕ್ಷ ಹೊರರೋಗಿಗಳು, 15 ರಿಂದ20 ಶಸ್ತ್ರಚಿಕಿತ್ಸೆ, 70 ರಿಂದ 80 ಸಹಜ ಹೆರಿಗೆ ಆಗುತ್ತದೆ. ಆದರೆ ಸರಾಸರಿ 43 ಹೆರಿಗೆ ಉತ್ತರ ಕೊಟ್ಟಿದ್ದೀರಿ. ಉತ್ತರ ವಾಸ್ತವಿಕ ವಿಚಾರಕ್ಕೆ ತದ್ವಿರುದ್ಧವಾಗಿದೆ. ನಾಲ್ಕು ತಾಲೂಕಿಗೆ ಸಂಬಂಧಿಸಿ ಪುತ್ತೂರು ಆಸ್ಪತ್ರೆಗೆ ಒತ್ತಡ ಹೆಚ್ಚಾಗುತ್ತಿದೆ. ಹಾಗಾಗಿ ಪುತ್ತೂರು ಆಸ್ಪತ್ರೆಯನ್ನು ತಾಯಿ ಮಕ್ಕಳ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಬೇಕು. ಅದಕ್ಕೆ ಬೇಕಾದ ಎಲ್ಲಾ ಸ್ಥಳಾವಕಾಶ ಕಾಯ್ದಿರಿಸುವ ಸಂಗತಿ ಮಾಡಿದ್ದೇವೆ. ಕಟ್ಟಡಕ್ಕೆ ಅಂದಾಜು ಪಟ್ಟಿಯನ್ನು ತಯಾರಿಸಿದ್ದೇವೆ. ಆದರೆ ನೀವು ಉತ್ತರದಲ್ಲಿ ಸರಕಾರದ ಪರಿಶೀಲನೆ ಇದೆ ಎಂದು ಹೇಳುತ್ತಿದ್ದೀರಿ. ಈ ನಿಟ್ಟಿನಲ್ಲಿ ಆದ್ಯತೆಯ ಮೇರೆಗೆ ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಮೇಲ್ದದರ್ಜೆಗೆ ಏರಿಸಬೇಕೆಂದು ತಾಯಿ ಮಕ್ಕಳ ಆಸ್ಪತ್ರೆಯನ್ನು ಮಾಡುವಂತೆ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಉತ್ತರಿಸಿದ ಸಚಿವ ಡಾ. ಸುಧಾಕರ್ ಅವರು ಈ ಕುರಿತು ಸರಕಾರದ ಮಟ್ಟದಲ್ಲಿ ಪರಿಶೀಲನೆ ಮಡುತ್ತಿದ್ದೇವೆ. ಅಲ್ಲಿ ವಾಸ್ತವ ಸ್ಥಿತಿಯನ್ನು ಅರಿಯಲು ಸಭೆ ಮಾಡೋಣ ಎಂದರು. ತಾಯಿ ಮಗುವಿನ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲು ಶೇ.60 ರಷ್ಟು ಕೇಂದ್ರ ಮತ್ತು ಶೇ.40ರಷ್ಟು ರಾಜ್ಯ ಸರಕಾರ ಅನುದಾನ ಕೊಡಬೇಕು. ಇಲ್ಲಿ ಮಾರ್ಗಸೂಚಿಗಳನ್ನು ಕಠಿಣ ಇದೆ. ಹಾಗಾಗಿ ಎಲ್ಲಾ ವಾಸ್ತವ ಸ್ಥಿತಿ ಇಟ್ಟುಕೊಂಡು ಪುತ್ತೂರಿನಲ್ಲಿ ಸಭೆ ಮಾಡೋಣ ಎಂದರು. ಶಾಸಕರು ಈ ಕುರಿತು ಮಾತನಾಡಿ ವಾಸ್ತವಿಕ ವಿಚಾರ ತಿಳಿಯುವ ಸಭೆ ಉತ್ತಮ ವಿಚಾರ ಎಂದರು.