ಗೂನಡ್ಕದಲ್ಲಿ ಮೀಸಲು ಅರಣ್ಯ ಜಾಗದ ಅಕ್ರಮ ಒತ್ತುವರಿಯನ್ನು 1 ತಿಂಗಳೊಳಗೆ ತೆರವುಗೊಳಿಸಲು ಹಿಂಜಾವೇ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ ಆಗ್ರಹ

0

ಪುತ್ತೂರು: ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಸುಳ್ಯ ವಲಯ ವ್ಯಾಪ್ತಿಯಲ್ಲಿರುವ ಸಂಪಾಜೆ ಶಾಖೆಯ ಸಂಪಾಜೆ ಗಸ್ತಿನ ಸಂಪಾಜೆ ಮೀಸಲು ಅರಣ್ಯ ಪ್ರದೇಶವಾದ ಗೂನಡ್ಕ ಎಂಬಲ್ಲಿ ಮೀಸಲು ಅರಣ್ಯದ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಅಕ್ರಮ ಮದರಸ ಮತ್ತು ದಫನಭೂಮಿಯನ್ನು ನಿರ್ಮಿಸಿದ್ದು, ಅದನ್ನು ೧ ತಿಂಗಳ ಒಳಗೆ ತೆರವುಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಸುಳ್ಯ ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ ಎಚ್ಚರಿಕೆ ನೀಡಿದ್ದಾರೆ.


ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಪಾಜೆ ಗ್ರಾಮದ ಬದ್ರಿಯಾ ಜುಮಾ ಮಸೀದಿ ಗೂನಡ್ಕ ಎನ್ನುವ ಸಮಿತಿಯು ಮಾಡಿಕೊಂಡು ಮೀಸಲು ಅರಣ್ಯ ಪ್ರದೇಶದ ಸರ್ವೇ ನಂಬರ್ 89/1 ಮತ್ತು 89/2ರ 20 ಸೆಂಟ್ಸ್ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಅಲ್ಲಿ ಅಕ್ರಮವಾದ ಮಸೀದಿ ಮತ್ತು ಮದರಸವನ್ನು ನಿರ್ಮಿಸಿ ಅಕ್ರಮವಾಗಿ ದಫನ ಮಾಡುವುದು ಇತ್ಯಾದಿ ಅಕ್ರಮ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಸ್ಥಳೀಯವಾಗಿ ಅರಣ್ಯ ಇಲಾಖೆಗೆ ದೂರು ನೀಡಿದ ಸಂದರ್ಭದಲ್ಲಿ ನಿಗದಿಪಡಿಸಿದ ಅವಧಿಯೊಳಗೆ ಒತ್ತುವರಿದಾರರು ತೆರವು ಮಾಡದೇ ಇದ್ದಲ್ಲಿ ಇಲಾಖಾ ವತಿಯಿಂದ ಒತ್ತುವರಿ ಪ್ರದೇಶದಲ್ಲಿ ಒತ್ತುವರಿ ನಿರ್ಮಿಸಿದ ಕಟ್ಟಡ ರಚನೆಗಳು, ಮತ್ತು ಯಾವುದೇ ಬೆಲೆ ಇದ್ದಲ್ಲಿ ನಿಯಮಾನುಸಾರ ಕಿತ್ತುಹಾಕಿ ತೆರವುಗೊಳಿಸಿ ಭೂಮಿಯನ್ನು ಇಲಾಖಾ ವಶಕ್ಕೆ ತೆಗೆದುಕೊಳ್ಳಬೇಕು ಮತ್ತು ಭೂಮಿಯನ್ನು ಅದರ ಮೂಲಸ್ಥಿತಿಗೆ ತರಲು ತಗಲುವ ವೆಚ್ಚವನ್ನು ಒತ್ತುವರಿದಾರರು ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 109ರ ಪ್ರಕಾರ ವಸೂಲಿ ಮಾಡಬೇಕೆನ್ನುವ ಆದೇಶವನ್ನು ಎಸಿಎಫ್ ಕೋರ್ಟ್ ಮಾಡಿದೆ. ಎಸಿಎಫ್ ಕೋರ್ಟ್‌ನ ಆದೇಶವನ್ನು ಸಿಸಿಎಫ್ ಕೋರ್ಟ್ ಕೂಡ ಎತ್ತಿಹಿಡಿದು ಅದೇ ಆದೇಶವನ್ನು ಜಾರಿಗೊಳಿಸಿದೆ. ಸಿಸಿಎಫ್ ಕೋರ್ಟ್‌ನ ಆದೇಶ ಸುಪ್ರೀಂ ಕೋರ್ಟ್ ಆದೇಶಕ್ಕೆ ಸಮಾನ ಎನ್ನುವ ಮಾತಿದೆ. ಆದ್ದರಿಂದ ಈ ಕೋರ್ಟ್‌ನ ಆದೇಶವನ್ನು ಪಾಲನೆ ಮಾಡಬೇಕು. ಗೂನಡ್ಕದಲ್ಲಿ ರಕ್ಷಿತಾರಣ್ಯದ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಜಾಗವನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಬೇಕು, ಆ ಕಟ್ಟಡವನ್ನು ತೆರವುಗೊಳಿಸಬೇಕು. ಈ ಕಟ್ಟಡದ ತೆರವಿಗೆ 2015 ಮೇ 15ರಂದು ಗೂನಡ್ಕ ಮಸೀದಿ ಕಮಿಟಿಯವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಲೋಕಾಯುಕ್ತ ಕೋರ್ಟ್‌ನಲ್ಲೂ ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತ ಕೋರ್ಟ್ ಕೂಡ ಇದನ್ನು ತೆರವುಗೊಳಿಸಬೇಕು ಎಂದು ಆದೇಶ ನೀಡಿದೆ ಎಂದು ಹೇಳಿದರು.

ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿ ನಮ್ಮಲ್ಲಿ ಎಲ್ಲಾ ದಾಖಲೆಗಳಿವೆ. ಕೋರ್ಟ್ ಆದೇಶವೂ ಇದೆ. ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಆದೇಶದ ಪ್ರತಿಯೂ ಇದೆ. ಜಿಲ್ಲಾಧಿಕಾರಿಯಿಂದ ಆರಂಭಿಸಿ ಎಲ್ಲಾ ಅಧಿಕಾರಿಗಳ ಜೊತೆಗೂ ಮಾತನಾಡಿದ್ದೇವೆ. ನಮ್ಮ ಜಿಜ್ಞಾಸೆ ಏನೆಂದರೆ ಈ ವಿಚಾರದಲ್ಲಿ ಭ್ರಷ್ಟ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅರಣ್ಯ ಇಲಾಖೆಯಲ್ಲಿ ತುಂಬಾ ರೀತಿಯ ಭ್ರಷ್ಟಾಚಾರಗಳು ನಡೆಯುತ್ತಿವೆ. ಮನೆಯಿಲ್ಲದವರು ಅರಣ್ಯ ಪ್ರದೇಶದ ಬದಿಯಲ್ಲಿ ಮನೆ ಕಟ್ಟಿ ಕೂತರೆ ಅವರನ್ನು ಎಬ್ಬಿಸುವುದು, ಕಿರುಕುಳ ನೀಡುವುದು, ಬಡವರು ಕಟ್ಟಿಗೆಗೆ ಹೋದಾಗಲೂ ಕಿರುಕುಳ ನೀಡುವುದು, ವಿದ್ಯುತ್ ಲೈನ್ ಹಾಕಲೂ ಕಿರುಕುಳ ನೀಡುವುದು ಇತ್ಯಾದಿ ಮಾಡುತ್ತಿದ್ದಾರೆ. ಆದರೆ ಇಲ್ಲಿ ಇಷ್ಟೆಲ್ಲ ಅಕ್ರಮ ನಡೆದಿದ್ದರೂ ಕ್ರಮ ಕೈಗೊಂಡಿಲ್ಲ. ಅಲ್ಲಿ ಅನೇಕ ಸಾಗುವಾನಿ ಮರಗಳನ್ನು ಕಡಿದು ಮಸೀದಿ ನಿರ್ಮಾಣ ಮಾಡಿದ್ದಾರೆ. ಅದು ಕೂಡ ಪ್ರಕರಣ ದಾಖಲಾಗಿದೆ. ಇಷ್ಟೆಲ್ಲಾ ಇದ್ದು, ಕೋರ್ಟ್ ಆದೇಶ ಇದ್ದರೂ ಭ್ರಷ್ಟ ಅಧಿಕಾರಿಗಳು ಮಸೀದಿಯವರ ಜೊತೆ ಶಾಮೀಲಾಗಿದ್ದಾರೆ ಎಂದು ನರಸಿಂಹ ಮಾಣಿ ಆರೋಪಿಸಿದರು.

ಒಂದು ತಿಂಗಳ ಒಳಗೆ ಅರಣ್ಯ ಇಲಾಖೆ ಈ ಜಾಗವನ್ನು ವಶಪಡಿಸಿಕೊಳ್ಳದೇ ಇದ್ದಲ್ಲಿ ಸುಳ್ಯ ವಲಯ ಅರಣ್ಯಾಧಿಕಾರಿ ಕಚೇರಿಗೆ ನಾವು ಮುತ್ತಿಗೆ ಹಾಕುತ್ತೇವೆ. ಮುಂದಕ್ಕೆ ಬೇರೆ ಬೇರೆ ರೀತಿಯ ಹೋರಾಟಗಳು ನಡೆಯಬಹುದು. ಹೋರಾಟದಲ್ಲಿ ಏನೇ ಅನಾಹುತಗಳಾದರೂ ಇದಕ್ಕೆ ನೇರ ಹೊಣೆ ಅರಣ್ಯ ಇಲಾಖೆ ಮತ್ತು ಸರಕಾರ. ಒಂದು ತಿಂಗಳ ಒಳಗೆ ಎಸಿಎಫ್ ಮತ್ತು ಸಿಸಿಎಫ್ ಕೋರ್ಟ್ ಮಾಡಿರುವ ಆದೇಶವನ್ನು ಊರ್ಜಿತಗೊಳಿಸಬೇಕು. ಆದೇಶದ ಪ್ರಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ನರಸಿಂಹ ಮಾಣಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲೆಯ ಉಪಾಧ್ಯಕ್ಷ ಜಯಂತ್ ಮೊಡಪ್ಪಾಡಿ, ಹಿಂದೂ ಜಾಗರಣಾ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಮಹೇಶ್ ಉಗ್ರಾಣಿಮನೆ, ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲೆಯ ಮಾತೃಸುರಕ್ಷಾ ಸಂಯೋಜಕ ರಾಜೇಶ್ ಪಂಚೋಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here