ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ನಂದಿನಿ ಜ್ಞಾನವಿಕಾಸ ಕೇಂದ್ರದ ೬ನೇ ಸಭೆ ಆನಡ್ಕ ಶಾಲೆಯಲ್ಲಿ ನಡೆಯಿತು. ಸಭೆಯಲ್ಲಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಂತಿಗೋಡು ಒಕ್ಕೂಟದ ಅಧ್ಯಕ್ಷ ನಾರಾಯಣ ಪೂಜಾರಿ ಉದ್ಘಾಟಿಸಿದರು. ಅತಿಥಿಗಳಾಗಿ ಪುತ್ತೂರು ತಾಲೂಕಿನ ಯೋಜನಾಧಿಕಾರಿ ಆನಂದ.ಕೆ ಹಾಗೂ ಜ್ಞಾನವಿಕಾಸ ಸಮನ್ವಯಧಿಕಾರಿ ಸುಜಾತರವರು ಆಗಮಿಸಿದ್ದರು. ಒಕ್ಕೂಟದ ಅಧ್ಯಕ್ಷ ನಾರಾಯಣ ಪೂಜಾರಿ ಮಾತನಾಡಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ತಿಳಿದಿರುತ್ತೇವೆ ಆದರೆ ಅದನ್ನು ಪ್ರಾತ್ಯಕ್ಷಿಕವಾಗಿ ನೋಡುವ ಅವಕಾಶ ಸಿಗುವುದಿಲ್ಲ, ಇವತ್ತು ಜ್ಞಾನ ವಿಕಾಸದ ಮುಖಾಂತರ ಬೇರೆ ಬೇರೆ ವಿಚಾರದ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ಹೇಳಿದರು.
ಜ್ಞಾನ ವಿಕಾಸದ ಸಮನ್ವಯಧಿಕಾರಿ ಸುಜಾತ ಮಾತನಾಡಿ ಶಾಲೆಯಲ್ಲಿ ಮಕ್ಕಳಿಗೆ ಪಾಠವೇ ಹೇಳುತ್ತಾ ಹೋದರೆ ಅರ್ಥವಾಗುವುದಿಲ್ಲ ಕಥೆ ಹೇಳುತ್ತಾ ಪದ್ಯ ಹೇಳುತ್ತ ಹೋದರೆ ಬೇಗ ಪಾಠ ಅರ್ಥವಾಗುತ್ತದೆ ಹಾಗೆಯೇ ಇಲ್ಲಿ ಸದಸ್ಯರಿಗೆ ಮಾಡಿ ತೋರಿಸುವುದರಿಂದ ಕಣ್ಣಾರೆ ನೋಡುವುದರಿಂದ ಅದರ ಪ್ರಯೋಜನ ಗೊತ್ತಾಗುತ್ತದೆ. ಅದಕ್ಕೆ ಪ್ರಾತ್ಯಕ್ಷತೆಗೇ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.
ಒಕ್ಕೂಟದ ಸೇವಾ ಪ್ರತಿನಿಧಿ ಅನುರಾಧರವರು ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು. ಅದರ ಜೊತೆಗೆ ಕೋಸಂಬರಿ ಪೌಷ್ಟಿಕ ತಿಂಡಿಯನ್ನು ಪ್ರಾತ್ಯಕ್ಷವಾಗಿ ಹೇಗೆ ಮಾಡುವುದು ಎಂದು ತಿಳಿಸಿಕೊಟ್ಟರು. ನಂತರ ಅತಿಥಿಗಳಾಗಿ ಆಗಮಿಸಿದ ಪುತ್ತೂರು ತಾಲೂಕಿನ ಯೋಜನಾಧಿಕಾರಿ ಆನಂದ. ಕೆ ರವರು ಮಾತನಾಡಿ ಪೇಟೆ ಮತ್ತು ಹಳ್ಳಿಗೆ ತುಂಬಾ ವ್ಯತ್ಯಾಸ ಇದೆ. ಪೇಟೆಯಲ್ಲಿ ತಿನ್ನುವುದು ಕಡಿಮೆ ಮಾಡಬೇಕು ಆರೋಗ್ಯ ಸರಿಯಾಗಿ ಇರಬೇಕಾದರೆ ಮನೆಯಲ್ಲಿ ಪೌಷ್ಟಿಕ ಆಹಾರ ತಯಾರಿಸಿ ತಿನ್ನಬೇಕು. ಆರೋಗ್ಯಕ್ಕೂ ಒಳ್ಳೆಯದು ಆಗಿನ ಕಾಲದಲ್ಲಿ ಖಾಯಿಲೆಗಳು ಇರಲಿಲ್ಲ ಹಾಗೆಯೇ ಖಾಯಿಲೆಗೆ ಮನೆಯಲ್ಲಿ ಮನೆಮದ್ದು ತಯಾರಿಸುತ್ತಿದ್ದೆವು. ಆದರೆ ಈಗ ರೋಗಗಳು ಜಾಸ್ತಿ ಆಗಿದೆ ನಾವು ಹಾಗೂ ನಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರ ಮನೆಯ ಸುತ್ತಮುತ್ತ ಇದ್ದ ಪೌಷ್ಟಿಕ ಸೊಪ್ಪುಗಳಿಂದ ಆಹಾರ ತಯಾರಿಸಿ ಕೊಡಬೇಕು. ಹೊರಗಿನ ತಿಂಡಿ ಸೇವನೆಗೆ ಖರ್ಚು ಮಾಡುವ ಬದಲು ಹಳ್ಳಿಯಲ್ಲಿ ಸಿಗುವ ಆಹಾರಕ್ಕೆ ಖರ್ಚು ಮಾಡಿ ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು. ನಂತರ ಇ-ಶ್ರಮ್ ಯೋಜನೆ ಬಗ್ಗೆ ಅದರ ಮಾಹಿತಿ ಉಪಯೋಗವನ್ನು ತಿಳಿಸಿಕೊಟ್ಟರು. ಎಲ್ಲ ಸಂಘದ ಸದಸ್ಯರು ವಿವಿಧ ರೀತಿಯ ಪೌಷ್ಟಿಕ ತಿಂಡಿಗಳನ್ನು ತಯಾರಿಸಿ ಬಡಿಸಿದರು.