ರಥ ಮಂದಿರದಿಂದ ಬ್ರಹ್ಮರಥ ಹೊರ ತರುವ ಮುಹೂರ್ತ – ರಥ ಬೀದಿಯನ್ನು ಸ್ಪರ್ಶ ಮಾಡಿ ಶುಭ ಸೂಚನೆ ನೀಡಿದ ಬಿಲ್ವಪತ್ರೆ

0

 

 

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ ನಡೆಯುವ ಜಾತ್ರೋತ್ಸವ ಸೇರಿದಂತೆ ಏ.17ರ ಬ್ರಹ್ಮರಥೋತ್ಸವಕ್ಕೆ ಸಿದ್ಧತೆಗಾಗಿ ಮಾ.21ರಂದು ಬೆಳಿಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥ ಬೀದಿಗೆ ತಂದು ನಿಲ್ಲಿಸುವ ಮೂಲಕ ಪುತ್ತೂರು ಜಾತ್ರೆಗೆ ಮುನ್ಸೂಚನೆ ನೀಡಲಾಗಿದೆ.

 

 

ಬೆಳಿಗ್ಗೆ ಶುಭ ಮೂಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಬ್ರಹ್ಮರಥಕ್ಕೆ ಪುಷ್ಪ, ಗಂಧ, ಬಿಲ್ವಪತ್ರೆ ಸಮರ್ಪಣೆ ಮಾಡಿ ವಿಜೃಂಭಣೆಯಿಂದ ಜಾತ್ರೆ ನಡೆಯುವಂತೆ ಪ್ರಾರ್ಥಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿಯ ಹಿರಿಯ ಸದಸ್ಯ ಬಿ.ಐತ್ತಪ್ಪ ನಾಯ್ಕ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಬ್ರಹ್ಮರಥವನ್ನು ಮಂದಿರದಿಂದ ಹೊರಗೆ ತರಲು ಚಾಲನೆ ನೀಡಿದರು. ಬಳಿಕ ದೇವಳದ ವಾಸ್ತು ಇಂಜಿನಿಯರ್ ಆಗಿರುವ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಮಾರ್ಗದರ್ಶನದಲ್ಲಿ ಆರಂಭದಲ್ಲಿ ರಥದ ಹಿಂಬದಿಯ ಚಕ್ರಕ್ಕೆ ದಂಡೆ ಇಟ್ಟು ಚಕ್ರಕ್ಕೆ ಚಾಲನೆ ನೀಡಲಾಯಿತು. ಬ್ರಹ್ಮರಥವನ್ನು ಕ್ರೈನ್ ಸಹಾಯದಿಂದ ಹೊರಗೆಳೆಯುವ ಕೆಲಸ ನಿರ್ವಹಿಸಲಾಯಿತು. ದೇವಾಲಯದ ಕೆಲಸಗಾರರು ಸೇರಿ ಬ್ರಹ್ಮರಥವನ್ನು ರಥಬೀದಿಗೆ ತಂದು ನಿಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷವ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ಶೇಖರ ನಾರಾವಿ, ಬಿ. ಐತ್ತಪ್ಪ ನಾಯ್ಕ್, ಬಿ.ಕೆ. ವೀಣಾ, ರಾಮ್‌ದಾಸ್ ಗೌಡ, ಡಾ.ಸುಧಾ ಎಸ್ ರಾವ್, ದೇವಾಲಯದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕಚೇರಿ ಸಹಾಯಕ ಪದ್ಮನಾಭ, ನಿತ್ಯ ಕರಸೇವೆಕ ರಾಮಚಂದ್ರ ಘಾಟೆ, ರೋಟರಿ ಕ್ಲಬ್ ಅಧ್ಯಕ್ಷ ಮಧು ನರಿಯೂರು, ಡಾ| ರಾಜೇಶ್ ಬೆಜ್ಜಂಗಳ ಮತ್ತಿತರರು ಉಪಸ್ಥಿತರಿದ್ದರು.

 

ರಥ ಬೀದಿಯನ್ನು ಸ್ಪರ್ಶ ಮಾಡುವ ಮೂಲಕ ಶುಭ ಸೂಚನೆ:
ಪ್ರತಿ ವರ್ಷ ಬ್ರಹ್ಮರಥವನ್ನು ರಥ ಬೀದಿಗೆ ತಂದು ರಥಕಟ್ಟುವ ಸ್ಥಳವನ್ನು ರಥಕ್ಕೆ ಅರ್ಪಣೆ ಮಡಿದ ಬಿಲ್ವಪತ್ರೆ ಭೂಮಿ ಸ್ಪರ್ಶದ ಮೂಲಕ ಸೂಚಿಸುತ್ತದೆ. ದೇವಳದ ಬಳಿಯ ನಾಗ ಸನ್ನಿಧಿಯ ಮುಗುಳಿಗೆ ಬ್ರಹ್ಮರಥವನ್ನು ನಿಲ್ಲಿಸಲಾಗುತ್ತದೆ. ಬ್ರಹ್ಮರಥ ರಥ ಬೀದಿ ಪ್ರವೇಶಿಸಿ ನಾಗ ಸನ್ನಿಧಿಯ ಮುಗುಳಿಗೆ ಸರಿಯಾಗಿ ಬರುತ್ತಿದ್ದಂತೆ ಬಿಲ್ವಪತ್ರೆ ಮತ್ತು ಗಂಧ ಪ್ರಸಾದ ಭೂಮಿಯನ್ನು ಸ್ಪರ್ಶ ಮಾಡುವ ಮೂಲಕ ರಥ ನಿಲ್ಲಿಸುವ ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here