![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಲ್ಯಾಡಿ: ಮಳೆನೀರು ಕೊಯ್ಲು ಅಳವಡಿಸುವ ಮೂಲಕ ಜಲಸಂರಕ್ಷಣೆ ಮಾಡುತ್ತಿರುವ ಡೇವಿಡ್ ಜೈಮಿ ಕೊಕ್ಕಡರವರು ವಿಶ್ವದಾಖಲೆಗೆ ಸೇರ್ಪಡೆಗೊಂಡಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಮಳೆ ನೀರು ಕೊಯ್ಲು ಫಿಲ್ಟರ್ ಸಂಶೋಧಿಸಿ ಮನೆಯ ಛಾವಣಿಯ ನೀರನ್ನು ಬಾವಿಗೆ ಇಂಗಿಸುತ್ತಾ ಜಲಮಟ್ಟ ವರ್ಧಿಸಿ ತಮ್ಮ ಮನೆ ಬಳಕೆಗೆ ಇದ್ದ ನೀರಿನ ಸಮಸ್ಯೆ ನಿವಾರಣೆ ಮಾಡಿದ್ದ ಡೇವಿಡ್ ಜೈಮಿಯವರು ನಂತರ ಎಲ್ಲರೂ ಮಳೆ ನೀರು ಕೊಯ್ಲು ಅಳವಡಿಸುವ ಮೂಲಕ ಜಲಸಂರಕ್ಷಣೆ ಕಾರ್ಯಗಳನ್ನು ಮಾಡಿದಲ್ಲಿ ತಮ್ಮ ಭೂಮಿ ಹಾಗೂ ಪರಿಸರಕ್ಕೆ ಹೆಚ್ಚಿನ ಪ್ರಯೋಜನ ಆಗಲಿದೆ ಎಂಬ ಉದ್ದೇಶವಿಟ್ಟು ಕೃಷಿ ಭೂಮಿ, ಮನೆಗಳಲ್ಲಿ ಅತೀ ಸರಳ ಮತ್ತು ಸುಲಭ ಜಲಸಂರಕ್ಷಣೆಯ ವಿಧಾನಗಳನ್ನು ಅಳವಡಿಸುವ ಬಗ್ಗೆ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ, ಸಂಘ ಸಂಸ್ಥೆಗಳಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಾ ಬರುತ್ತಿದ್ದಾರೆ. ಇವರು ಮಾಡಿರುವ ಜಲಸಂರಕ್ಷಣೆ ವಿಧಾನ ಈಗ ಗೋಲ್ಡನ್ ಬುಕ್ ವರ್ಲ್ಡ್ ರೇಕಾರ್ಡ್ಗೆ ಸೇರ್ಪಡೆಯಾಗಿದೆ.
ಕೃಷಿ ಭೂಮಿಯಲ್ಲಿ ಅತೀ ಹೆಚ್ಚು ಜಲಸಂರಕ್ಷಣಾ ವಿಧಾನಗಳನ್ನು ಅಳವಡಿಸಿದ ಕೃಷಿಕ ಎಂದು ಗೋಲ್ಡನ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಆಗಿರುತ್ತದೆ. ಇದರ ಮುಖ್ಯ ಉದ್ದೇಶ ಅತೀ ಸರಳ ಮತ್ತು ಸುಲಭ, ಕಡಿಮೆ ಖರ್ಚಿನ ಜಲಸಂರಕ್ಷಣಾ ವಿಧಾನಗಳನ್ನು ಅಳವಡಿಸಲು ಎಲ್ಲರಲ್ಲೂ ಆಸಕ್ತಿ ಮೂಡಿಸಿ ಪ್ರೇರಣೆ ನೀಡಿ ಜಲಸಂರಕ್ಷಣೆ, ಅಂತರ್ಜಲ ವೃದ್ಧಿ, ಪರಿಸರವನ್ನು ಉಳಿಸುವುದು ಮತ್ತು ನೀರಿನ ಸಮಸ್ಯೆಗಳನ್ನು ದೂರ ಮಾಡುವುದು ಆಗಿರುತ್ತದೆ. ನನ್ನ ೧೨ ವರ್ಷದ ಜಲಸಂರಕ್ಷಣಾ ಕಾರ್ಯದಲ್ಲಿ ನನ್ನ ಬೆನ್ನು ತಟ್ಟಿ ಸಹಕಾರ, ಮಾರ್ಗದರ್ಶನ, ಸಹಾಯ, ಪ್ರೋತ್ಸಾಹ ನೀಡಿದವರಿಗೆ ಕೃತಜ್ಞತೆ ಹೇಳ ಬಯಸುತ್ತೇನೆ ಎಂದು ಡೇವಿಡ್ ಜೈಮಿ ಕೊಕ್ಕಡ ಹೇಳಿದ್ದಾರೆ.