ಪುತ್ತೂರು: ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಸತ್ಯನಾರಾಯಣನಗರ, ಉರ್ಲಾಂಡಿ ಚಾಂದ್ರಮಾನ ಯುಗಾದಿ ಪ್ರಯುಕ್ತ ಶ್ರೀ ಸತ್ಯನಾರಾಯಣ ದೇವರ ಪುನರ್ ಪ್ರತಿಷ್ಠೆ ಹಾಗೂ ೫೦ನೇ ವರ್ಷದ ಸತ್ಯನಾರಾಯಣ ಪೂಜೆಯು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಏ.1ರಂದು ನಡೆಯಿತು. ಏ.1ರಂದು ಸಂಜೆ ಸ್ಥಳ ಶುದ್ಧಿ, ವಾಸ್ತುಪೂಜೆ ನಡೆದು, ಏ.೦2ರಂದು ಬೆಳಿಗ್ಗೆ ಗಣಪತಿ ಹೋಮ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ ದೇವರನ್ನು ಬಾಲಾಲಯದಿಂದ ಗರ್ಭಗುಡಿಗೆ ತಂದು ಶ್ರೀ ಸತ್ಯನಾರಾಯಣ ಸ್ವಾಮಿಯ ಪುನರ್ ಪ್ರತಿಷ್ಠಾಪನೆ, ಶಿಖರ ಪ್ರತಿಷ್ಠೆ ನಡೆದು, ಅಶ್ವಥ್ಥ ಪೂಜೆ, ಸಂಜೆ ವೆ.ಮೂ. ಬನಾರಿ ಹರಿಪ್ರಸಾದ್ ಭಟ್ರ ನೇತೃತ್ವದಲ್ಲಿ ಕಲಶ ಪ್ರತಿಷ್ಠೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ, ಸರಸ್ವತಿ ಭಜನಾ ಮಂದಿರದ ಸದಸ್ಯರಿಂದ ಭಜನೆ, ಬಳಿಕ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಗೌರವಾಧ್ಯಕ್ಷ ಎ.ಜೆ. ನೈಕ್, ಅಧ್ಯಕ್ಷ ನಡುಸಾರು ಶಿವಭಟ್, ಕಾರ್ಯದರ್ಶಿ ಅಶೋಕ್ ಕುಂಬ್ಲೆ, ಕೋಶಾಧಿಕಾರಿ ಪುರುಷೋತ್ತಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ್ ಗೌಡ ಉರ್ಲಾಂಡಿ, ಕಾರ್ಯದರ್ಶಿ ಪುಷ್ಪರಾಜ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.