ಪುತ್ತೂರು: ಇತ್ತೀಚೆಗೆ ನಿಧನರಾದ ಪ್ರಗತಿಪರ ಕೃಷಿಕರಾದ ಸಾಜ ಸಾರ್ಯಬೀಡು ನಾರಾಯಣ ಶೆಟ್ಟಿರವರ ಉತ್ತರಕ್ರಿಯಾದಿ ಕಾರ್ಯಕ್ರಮ ಹಾಗೂ ಶ್ರದ್ಧಾಂಜಲಿ ಸಭೆಯು ಏ.೯ ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ಜರಗಿತು.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸದಸ್ಯ ರಾಕೇಶ್ ಶೆಟ್ಟಿಯವರು ಮಾತನಾಡಿ, ಪ್ರಗತಿಪರ ಕೃಷಿಕರಾದ ಬಪ್ಪೋನಿ ಶೆಟ್ಟಿ ಹಾಗೂ ಗೋಪಿ ಶೆಟ್ಟಿಯವರ ಹಿರಿಯ ಪುತ್ರನಾಗಿ ಜನಿಸಿದ ಸಾಜ ನಾರಾಯಣ ಶೆಟ್ಟಿಯವರು ಮಿತಭಾಷಿಯಾಗಿದ್ದು, ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಕೂಡಿದ ಶ್ರಮಜೀವಿಯಾಗಿರುತ್ತಾರೆ. ಯಾರಿಗೂ ಕೇಡು ಬಯಸದ, ಯಾರಿಗೂ ನೋವುಂಟು ಮಾಡುವ ಶಬ್ದ ಬಳಸದ, ಯಾರಿಗೂ ಹೊರೆಯಾಗದ, ಯಾರದೇ ಎದುರು ಕೈ ಚಾಚದ, ಸ್ವಾಭಿಮಾನಿ ವ್ಯಕ್ತಿತ್ವವುಳ್ಳವರಾಗಿದ್ದಾರೆ. ಶರಣರ ಬಾಳನ್ನು ಮರಣದಲ್ಲಿ ಕಾಣು ಎಂಬಂತಿರುವ ನಾಣ್ಣುಡಿಯು ತನ್ನ ಉತ್ತಮ ಗುಣದಿಂದ ಸಾಜ ನಾರಾಯಣ ಶೆಟ್ಟಿಯವರು ಹೆಸರನ್ನು ಗಳಿಸಿಕೊಂಡಿರುವವರಾಗಿದ್ದಾರೆ ಎಂದು ಹೇಳಿ ಅಗಲಿದ ಸಾಜ ನಾರಾಯಣ ಶೆಟ್ಟಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಅಗಲಿದ ಸಾಜ ಸಾರ್ಯಬೀಡು ನಾರಾಯಣ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಅಗಲಿದ ನಾರಾಯಣ ಶೆಟ್ಟಿಯವರ ಪತ್ನಿ ಸುಶೀಲ ಶೆಟ್ಟಿ, ಪುತ್ರರಾದ ಆಶ್ಮಿ ಕಂಫರ್ಟ್ ಮಾಲಕ ಹಾಗೂ ರೋಟರಿ ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಾಜ ಸಂತೋಷ್ ಶೆಟ್ಟಿ, ಸಾಜ ಸುದೇಶ್ ಶೆಟ್ಟಿ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಉಮೇಶ್ ಶೆಟ್ಟಿ, ಹರಿಪ್ರಕಾಶ್ ಶೆಟ್ಟಿ, ಸಂದೇಶ್ ಶೆಟ್ಟಿ, ಸೊಸೆಯಂದಿರು, ಮೊಮ್ಮಕ್ಕಳು, ಹಿತೈಷಿಗಳು, ಬಂಧುಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.