ಪುತ್ತೂರು: ಹಲವು ವರ್ಷಗಳ ಹಿಂದೆ ಕೋಲ್ಟ್ಸ್ ದರ್ಬೆ ಹಾಗೂ ನೆಲ್ಲಿಕಟ್ಟೆ ಕ್ರಿಕೆಟ್ ತಂಡಗಳು ಪುತ್ತೂರಿನಲ್ಲಿ ಜನಜನಿತವಾಗಿದ್ದು, ಈ ಪೈಕಿ ಕೋಲ್ಟ್ಸ್ ದರ್ಬೆ ಹಾಗೂ ನೆಲ್ಲಿಕಟ್ಟೆ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸುತ್ತಿದ್ದ ಹಿರಿಯ ಆಟಗಾರ, ಮರೀಲ್ ನಿವಾಸಿ ಗಣೇಶ್ ಕುಮಾರ್ ರಾವ್(61ವ)ರವರು ಅಸೌಖ್ಯದಿಂದ ಏ.8 ರಂದು ನಿಧನ ಹೊಂದಿದ್ದಾರೆ.
ದಿ.ಆನಂದ್ ಹಾಗೂ ಪುಷ್ಪಾವತಿ ದಂಪತಿ ಪುತ್ರರಾಗಿ ಜನಿಸಿದ ಗಣೇಶ್ ಕುಮಾರ್ರವರು ಓರ್ವ ಎಡಗೈ ದಾಂಡಿಗ ಹಾಗೂ ಬೌಲರ್ ಆಗಿ ಪುತ್ತೂರಿನಲ್ಲಿ ಗಮನ ಸೆಳೆದಿದ್ದರು. ಕೇವಲ ಅಂಡರ್ ಆರ್ಮ್ ಕ್ರಿಕಟ್ ಮಾತ್ರವಲ್ಲದೆ ಲೆದರ್ಬಾಲ್ ಕ್ರಿಕೆಟ್ನಲ್ಲೂ ಪ್ರಾವೀಣ್ಯತೆ ಹೊಂದಿದ್ದ ಗಣೇಶ್ ಕುಮಾರ್ರವರು ಮಂಗಳೂರಿನಲ್ಲಿ ನಡೆದ ಕ್ರಿಕೆಟ್ ಪಂದ್ಯಾಟವೊಂದರಲ್ಲಿ ಯೂನಿಯನ್ ಕ್ರಿಕೆಟರ್ಸ್ ಪರ ಎರಡು(103, 101ರನ್) ಶತಕಗಳನ್ನು ಬಾರಿಸಿರುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಮೃತ ಗಣೇಶ್ ಕುಮಾರ್ರವರು ತಾಯಿ ಪುಷ್ಪಾವತಿ, ಪತ್ನಿ ಅಮಿತಾ, ಪುತ್ರ ರಿತೇಶ್, ಪುತ್ರಿಯರಾದ ರಶ್ಮಿ, ರೇಶ್ಮಾ, ಸಹೋದರರಾದ ಸುರೇಶ್ ಕುಮಾರ್, ದಿನೇಶ್ ಕುಮಾರ್ರವರನ್ನು ಅಗಲಿದ್ದಾರೆ.