ಉಪ್ಪಿನಂಗಡಿ: ಮುಸ್ಲಿಮರ ಮೇಲೆ ಆರೆಸ್ಸೆಸ್ನಿಂದ ಅವಮಾನ, ವ್ಯವಸ್ಥಿತ ಪಿತೂರಿ, ಹಿಂದೂಗಳನ್ನು ಮುಸ್ಲಿಮರ ಮೇಲೆ ಎತ್ತಿಕಟ್ಟುವಂತಹ ಷಡ್ಯಂತ್ರಗಳು ಇದೀಗ ನಿರಂತರವಾಗಿ ನಡೆಯುತ್ತಿದ್ದು, ಹೀಗೆ ಹೋದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಭಾರತವು ಜಾತ್ಯತೀತ ರಾಷ್ಟ್ರವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ ಅಬ್ದುರ್ರಝಾಕ್ ಸೀಮಾ ಆತಂಕ ವ್ಯಕ್ತಪಡಿಸಿದರು.
`ಮುಸ್ಲಿಮ್ ವಿರೋಧಿ ಹಿಂಸಾಚಾರವು ಸಂಘಪರಿವಾರದ ಪಿತೂರಿ. ಮುಸ್ಲಿಮರ ಮೇಲಿನ ದಾಳಿಯನ್ನು ನಿಲ್ಲಿಸಿ’ ಎಂಬ ಬೇಡಿಕೆಯೊಂದಿಗೆ ಪಿಎಫ್ಐ ಕರೆ ಕೊಟ್ಟಿರುವ ದೇಶವ್ಯಾಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಎ.15ರಂದು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸ್ಕಾರ್ಫ್ ವಿವಾದ, ಗೋ ಹತ್ಯೆ ನಿಷೇಧ, ಮಸೀದಿಗಳ ಧ್ವನಿವರ್ಧಕ ತೆರವು ಹೀಗೆ ಹಲವು ಪಿತೂರಿಗಳನ್ನು ನಡೆಸಿ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಕಾರ್ಯ ಆರೆಸ್ಸೆಸ್ ಹಾಗೂ ಅದರ ರಾಜಕೀಯ ಪಕ್ಷ ಬಿಜೆಪಿ ನಡೆಸುತ್ತಿದ್ದು, ಸ್ಕಾರ್ಫ್ ವಿವಾದ ತಂದು ಮುಸ್ಲಿಂ ಹೆಣ್ಮಕ್ಕಳ ವಿದ್ಯಾಭ್ಯಾಸವನ್ನೇ ಹಾಳು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ತಾಕತ್ತಿದ್ದರೆ ಗೋವಾ ಸರಕಾರ ಗೋ ಹತ್ಯೆ ಕಾನೂನು ಜಾರಿಗೆ ತರಲಿ. ಕೊರೋನಾ ಬಂದು ಹಿಂದೂಗಳು ಸತ್ತಾಗ ಅವರ ಹೆಣ ಸುಡಲು ಅವರ ಬಂಧುಗಳು ಬಾರದೇ ಇದ್ದಾಗ ಎಲ್ಲರೂ ನಮ್ಮ ಸಹೋದರರು ಎಂಬ ಭಾವನೆಯಿಂದ ಅಲ್ಲಿ ನೆರವಿಗೆ ಬಂದಿದ್ದು ಮುಸ್ಲಿಮ್ ಸಮುದಾಯ. ಅಗತ್ಯ ಬಿದ್ದಾಗ ರಕ್ತ ಕೊಟ್ಟದ್ದು ಇದೇ ಮುಸ್ಲಿಮ್ ಸಮುದಾಯ. ಮೋದಿಯ ಆಡಳಿತ ಸಂದರ್ಭ ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಜೀವ ಹೋಗುತ್ತಿರುವ ಸಂದರ್ಭದಲ್ಲಿ ದೇಶದ ಜನರ ನೆರವಿಗೆ ಬಂದಿದ್ದು ಮುಸ್ಲಿಮ್ ರಾಷ್ಟ್ರ ಎನ್ನುವುದು ಆರೆಸ್ಸೆಸ್ಗೆ ನೆನಪಿರಲಿ. ಈಗ ಹಿಂದೂ ದೇವಾಲಯಗಳ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಸ್ಥರ ಬಹಿಷ್ಕಾರ ನಡೆಯುತ್ತಿದೆ. ಇದು ಒಂದೆರಡು ದಿನಗಳ ಜಾತ್ರೆಗೆ ಸೀಮಿತವಾಗಬಾರದು. ತಾಕತ್ತಿದ್ದರೆ, ಇದನ್ನು ಬೆಂಬಲಿಸುವ ಪ್ರತಿಯೋರ್ವ ಹಿಂದೂವು ತನ್ನ ಅಂಗಡಿಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬೋರ್ಡ್ ಹಾಕಲಿ. ಮುಸ್ಲಿಮ್ ಗ್ರಾಹಕರನ್ನು ಬಹಿಷ್ಕರಿಸಲಿ ಎಂದು ಸವಾಲೆಸೆದರು.
ಪಿಎಫ್ಐ ಪುತ್ತೂರು ಜಿಲ್ಲಾ ಸಮಿತಿ ಸದಸ್ಯ ಉಸ್ಮಾನ್ ಮಾತನಾಡಿದರು. ಪ್ರತಿಭಟನೆಯಲ್ಲಿ ಪಿಎಫ್ಐ ಮುಖಂಡರಾದ ಮುಸ್ತಾಫ ನಿರ್ಮ, ರಝಾಕ್ ಕುದ್ರಡ್ಕ, ಖಿಲ್ಲ್ರ್ ಕೆಮ್ಮಾರ ಮತ್ತಿತರರಿದ್ದರು.ಪಿಎಫ್ಐನ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷ ಹಮೀದ್ ಹಾಜಿ ಮೆಜೆಸ್ಟಿಕ್ ಸ್ವಾಗತಿಸಿದರು. ಹನೀಫ್ ಬಿಳಿಯೂರು ಕಾರ್ಯಕ್ರಮ ನಿರೂಪಿಸಿದರು.