38 ವರ್ಷಗಳ ಬಳಿಕ ಪುನರ್ಮಿಲನದೊಂದಿಗೆ ಸಂಭ್ರಮಿಸಿದ ಫಿಲೋಮಿನಾ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು

0

ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿನ 1983- 84 ನೇ ಸಾಲಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ‘ಪುನರ್ಮಿಲನ’ ಕಾರ್ಯಕ್ರಮ ದಿನಾಂಕ 17.04 2022ರಂದು ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಿತು. ಸ್ಥಳೀಯ ವಿದ್ಯಾರ್ಥಿಗಳ ಜೊತೆ ಪ್ರಸ್ತುತ ಬಾಂಬೆ, ಚೆನ್ನೈ, ಗೋವಾ, ಕ್ಯಾಲಿಕಟ್, ಮಡಿಕೇರಿ, ಮಂಡ್ಯ, ಮೈಸೂರು, ಬೆಂಗಳೂರು, ಧಾರವಾಡ, ಮಂಗಳೂರು ಇಲ್ಲಿ ವಾಸ್ತವ್ಯವಿರುವ ಸುಮಾರು 52 ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರು ಭಾಗವಹಿಸಿದ ಈ ಕಾರ್ಯಕ್ರಮವು, 38 ವರ್ಷಗಳ ಬಳಿಕ ಸುಮಾರು 59ರ ವಯೋಮಾನದಲ್ಲಿರುವ ಯುವ ಮನಸ್ಸುಗಳಿಗೆ 20ರ ತಾರುಣ್ಯವನ್ನು ಮರುಕಳಿಸುವಲ್ಲಿ ಯಶಸ್ವಿಯಾಯಿತು ಎಂದರೆ ತಪ್ಪಲ್ಲ. ಭಾಗವಹಿಸಿದ ಎಲ್ಲಾ ಸದಸ್ಯರು ತಮ್ಮ ಹದಿಹರೆಯದ ಮನ:ಸ್ಥಿತಿಯಲ್ಲಿ ವಿಚಾರವಿನಿಮಯ ಮಾಡಿಕೊಳ್ಳುವುದನ್ನು ನೋಡುವಾಗ ಮನಸ್ಸು ತುಂಬಿ ಬರುತ್ತಿತ್ತು.

 

ತಮ್ಮ ಪರಿಚಯವನ್ನು ಮಾಡಿಕೊಳ್ಳುತ್ತಿದ್ದ ಪ್ರತಿಯೊಬ್ಬರು ಆ ಕಾಲದ ತಮ್ಮ ಆರ್ಥಿಕ ಅಡಚಣೆ, ವಿದ್ಯಾರ್ಜನೆಗೆ ಇದ್ದ ಮಾಹಿತಿಯ ಕೊರತೆ, ಮುಕ್ತ ಮಾತುಕತೆಗೆ ಇದ್ದ ತಡೆಗೋಡೆ, ಶಿಸ್ತಿನ ಸಿಪಾಯಿಗಳಂತಿದ್ದ ಬೋಧಕ ವರ್ಗದವರ ನಡವಳಿಕೆಗಳು, ತಮ್ಮ ಸ್ವಪ್ರಯತ್ನದಿಂದ ಮೇಲೆ ಬಂದ ಅನುಭವಗಳು, ಬದುಕಿನಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮೇಲೆ ಬಂದ ರೀತಿ ನೀತಿಗಳು ಮತ್ತು ತಮ್ಮ ಮಕ್ಕಳನ್ನು ಸಮಾಜಕ್ಕೆ ಹೊಂದಿಕೊಳ್ಳುವಂತೆ ಬೆಳೆಸಿದ ರೀತಿಯನ್ನು ತಮ್ಮ ಮನದಾಳದಿಂದ ವ್ಯಕ್ತಪಡಿಸುತ್ತಾ, 20ರ ತಾರುಣ್ಯ ಮತ್ತೊಮ್ಮೆ ಸಿಕ್ಕಷ್ಟು ಸಂತೋಷದಿಂದ ಪರಸ್ಪರ ಕುಶಲೋಪರಿ ಹಂಚಿಕೊಳ್ಳುತ್ತಿದ್ದುದು ಎದ್ದುಕಾಣುತ್ತಿತ್ತು. ಸ್ಥಳೀಯ ವಿದ್ಯಾರ್ಥಿಗಳ ಜವಾಬ್ದಾರಿಯಲ್ಲಿ ಸದರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕಾರ್ಯಕ್ರಮವು ಶ್ರೀಮತಿ ಪದ್ಮಿನಿ ಶೆಣೈಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶ್ರೀ ರಾಮಚಂದ್ರ ಬಂದ ಎಲ್ಲಾ ಸದಸ್ಯರನ್ನು ಪ್ರೀತಿಯಿಂದ ಸ್ವಾಗತಿಸಿದರು. ಶ್ರೀ ಕರುಣಾಕರ ರೈ ಬಾಲ್ಯೊಟ್ಟುಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಸವಿಯಾದ ಊಟದ ವ್ಯವಸ್ಥೆಯ ಜವಾಬ್ದಾರಿಯನ್ನು ಶ್ರೀ ರಾಜೇಶ್ ಕಾಮತ್ ವಹಿಸಿದ್ದರು. ಎಲ್ಲರನ್ನು ವಾಟ್ಸಪ್ ಮತ್ತು ವೈಯಕ್ತಿಕ ಕರೆಗಳ ಮೂಲಕ ಒಟ್ಟುಗೂಡಿಸುವ ಜವಾಬ್ದಾರಿಯನ್ನು ಶ್ರೀಮತಿ ಶರತ್ ಕುಮಾರಿ, ಶ್ರೀಮತಿ ಜ್ಯೊತ್ಸ್ನಾ ಶೆಟ್ಟಿ ಧಾರವಾಡ, ಶ್ರೀ ನರಸಿಂಹ ಪ್ರಸಾದ್, ಶ್ರೀ ಪೂಣಚ್ಚ ಮಡಿಕೇರಿ ಮಾಡಿದ್ದರು. ಡಾ. ಉಮ್ಮಪ್ಪ ಪೂಜಾರಿ ಗೂಗಲ್ ಮೀಟ್ ಮೂಲಕ ಎಲ್ಲರನ್ನು ಒಟ್ಟುಗೂಡಿಸುವ ವ್ಯವಸ್ಥೆ ಮಾಡಿದರು, ಜೊತೆಯಲ್ಲಿ ಉದ್ಯೋಗದಲ್ಲಿ ತಾನು ಮೇಲೇರಿದ ರೀತಿಯನ್ನು ಯುವ ಮನಸ್ಸುಗಳಿಗೆ ಪ್ರೇರಣೆಯಾಗುವ ರೀತಿ ವಿವರಿಸಿದರು. ಈ ಸಂದರ್ಭದಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವ ಸಹಪಾಠಿಗೆ ಧನಸಹಾಯ ನೀಡಲಾಯಿತು. ಕೊನೆಯಲ್ಲಿ ಶ್ರೀ ಜಯಕುಮಾರ್ ರೈ ಎಲ್ಲರನ್ನೂ ಶುಭ ನಮನಗಳ ಮೂಲಕ ಬೀಳ್ಕೊಟ್ಟರು. ಒಂದು ವರ್ಷದಲ್ಲಿ ಮತ್ತೆ ಒಟ್ಟು ಸೇರುವ ಶರತ್ತಿನೊಂದಿಗೆ ಕಾರ್ಯಕ್ರಮವು ಸಮಾಪನಗೊಂಡಿತು.

LEAVE A REPLY

Please enter your comment!
Please enter your name here