ಬೆಟ್ಟಂಪಾಡಿ: ಕೇಂದ್ರ ಸರಕಾರದ ‘ಕಿಸಾನ್ ಭಾಗೀದಾರಿ ಪ್ರಾಥಮಿಕತಾ ಹಮಾರಿ ಅಭಿಯಾನ’ ದ ಅಂಗವಾಗಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಪಾಠಶಾಲಾ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಾಗಾರ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ರವರು ರಾಷ್ಟ್ರದ ರೈತರನ್ನು ಉದ್ದೇಶಿಸಿ ನಡೆಸಿದ ಸಂವಾದ ಕಾರ್ಯಕ್ರಮದ ನೇರ ಪ್ರಸಾರ ಏ. 27 ರಂದು ಬೆಟ್ಟಂಪಾಡಿ ಪಂಚಾಯತ್ ಸಮುದಾಯ ಭವನದಲ್ಲಿ ಬೆಟ್ಟಂಪಾಡಿ ಪಂಚಾಯತ್, ಸುಧಾಂಶ್ ಸಾಮಾನ್ಯ ಸೇವಾ ಕೇಂದ್ರ ಸಂಪ್ಯ, ಧೃತಿ ಸೇವಾ ಕೇಂದ್ರ ನಗರ ಹಾಗೂ ಶಿವಂ ಡಿಜಿಟಲ್ ಸರ್ವಿಸಸ್ ರೆಂಜ ಇವರ ಜಂಟಿ ಸಹಯೋಗದಲ್ಲಿ ನಡೆಯಿತು.
ಪಂಚಾಯತ್ ಅಧ್ಯಕ್ಷೆ ಪವಿತ್ರ ಡಿ. ಯವರು ಅಧ್ಯಕ್ಷತೆ ವಹಿಸಿ ರೈತ ಉಪಯೋಗಿ ಮಾಹಿತಿ ಕಾರ್ಯಕ್ರಮ ಕ್ಕೆ ನಮ್ಮ ಗ್ರಾಮದ ರೈತರು ಭಾಗವಹಿಸುವಂತೆ ಮಾಡುವ ಜವಾಬ್ದಾರಿ ನಮ್ಮಲ್ಲಿದೆ ಎಂದರು.
ಕೃಷಿ ಇಲಾಖೆಯ ಡಿಡಿಐ ಶಿವಶಂಕರ್, ಯುನಿವರ್ಸಲ್ ಸೊಂಪೊ ವಿಮಾ ಕಂಪೆನಿಯ ತಾಲೂಕು ಸಂಯೋಜಕ ಮಧುರಾಜ್, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಸಿಬಂದಿ ಲಿಂಗಪ್ಪ ಗೌಡ ಹಾಗೂ ಬ್ಯಾಂಕ್ ಆಫ್ ಬರೋಡ ಬೆಟ್ಟಂಪಾಡಿ ಶಾಖೆಯ ವ್ಯವಸ್ಥಾಪಕ ಸತೀಶ್ ಕುಮಾರ್ ರವರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಗುತ್ತು ಮಾತನಾಡಿ ಸರ್ಕಾರದ ಯೋಜನೆಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಸರಿಯಾದ ಮಾಹಿತಿಯನ್ನು ರೈತರು ಹೊಂದಿದ್ದಾಗ ಊರು, ಗ್ರಾಮ, ದೇಶ ಅಭಿವೃದ್ಧಿ ಯಾಗುತ್ತದೆ’ ಎಂದರು. ಕೃಷಿ ಇಲಾಖೆಯ ಎಒ ಯಶಸ್ ಮಂಜುನಾಥ್ ಉಪಸ್ಥಿತರಿದ್ದರು.
ಗ್ರಾ.ಪಂ. ಕಾರ್ಯದರ್ಶಿ ಬಾಬು ನಾಯ್ಕ್ ಸ್ವಾಗತಿಸಿ, ಸುಧಾಂಶ್ ಸಾಮಾನ್ಯ ಸೇವಾ ಕೇಂದ್ರದ ಉಮೇಶ್ ಮಿತ್ತಡ್ಕ ವಂದಿಸಿ ನಿರೂಪಿಸಿದರು. ಸುಧಾಂಶ್ ಸಾಮಾನ್ಯ ಸೇವಾ ಕೇಂದ್ರದ ನಿಕಿತ, ಧೃತಿ ಸಾಮಾನ್ಯ ಸೇವಾ ಕೇಂದ್ರದ ಸಂತೋಷ್ ಹಾಗೂ ಶಿವಂ ಡಿಜಿಟಲ್ ಸರ್ವಿಸಸ್ ನ ರಂಜಿತ್ ಮತ್ತು ಪಂಚಾಯತ್ ಸಿಬಂದಿಗಳು ಸಹಕರಿಸಿದರು. ಪ್ರೊಜೆಕ್ಟರ್ ಸ್ಕ್ರೀನ್ ಮುಖಾಂತರ ನೇರ ಪ್ರಸಾರದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.