ಪುತ್ತೂರು: ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ಭೂತಬಲಿ ಉತ್ಸವವು ಮೇ.01 ರಿಂದ ಆರಂಭಗೊಂಡು ಮೇ.03 ರವರೇಗೆ ನಡೆಯಲಿದೆ. 01 ರಂದು ರಾತ್ರಿಯ ಪೂಜೆಯಾಗಿ ಉತ್ಸವ ಸಾಮಾಗ್ರಿಗಳನ್ನು ತುಂಬಿಸುವುದು (ಅತ್ತಲ) ನಂತರ ಹುಲಿಭೂತ, ಧೂಮಾವತಿ, ಪಟ್ಟದ ಅರಸ ಬೀರ್ಣಾಳ್ವ ದೈವಗಳಿಗೆ ತಂಬಿಲ ನಡೆಯಲಿದೆ. 02 ರಂದು ಬೆಳಿಗ್ಗೆ ನಿತ್ಯ ಪೂಜೆಯಾಗಿ 8 ಕ್ಕೆ 108 ತೆಂಗಿನಕಾಯಿ ಗಣಪತಿ ಹೋಮ, ಪ್ರಸಾದ ವಿತರಣೆ, 10.30 ಕ್ಕೆ ಏಕದಶ ರುದ್ರ, 135 ಸೀಯಾಳ ಅಭಿಷೇಕ, 135 ಕುಡ್ತೆ ದನದ ಹಾಲು ಅಭಿಷೇಕವಾಗಿ ಭಕ್ತಾಭಿಮಾನಿಗಳ ತುಲಾಭಾರ ಸೇವೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನದಾನ ನಡೆಯಲಿದೆ. ರಾತ್ರಿ ಶ್ರೀ ಕ್ಷೇತ್ರದ ಕಾರ್ಯಸ್ಥ ಗುಳಿಗ ದೈವದ ಕೋಲ, ಶ್ರೀ ದೇವರ ಶೃಂಗಾರ ಬಲಿ ಉತ್ಸವ ಬಳಿಕ ಅನ್ನದಾನ ನಡೆಯಲಿದೆ. 02 ರಂದು ಬೆಳಿಗ್ಗೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ , ಶ್ರೀಗಂಧ ಪ್ರಸಾದ ವಿತರಣೆ ನಡೆಯಲಿದೆ.
ಮೇ.02 ರಂದು ರಾತ್ರಿ ಉತ್ಸವಕ್ಕೆ ಯಂ.ವೇಣುಗೋಪಾಲ ಪುತ್ತೂರು ಇವರಿಂದ ಸೆಕ್ಸೋಫೋನ್ ಸೇವೆ, ಗುಳಿಗ ದೈವದ ಕೋಲಕ್ಕೆ ಯಾದವ ನೆಟ್ಟಣಿಗೆ ಮತ್ತು ಬಳಗದವರಿಂದ ನಾಗಸ್ವರ ವಾದ್ಯ ಸೇವೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಗಂಧಪ್ರಸಾದ ಸ್ವೀಕರಿಸುವಂತೆ ಕ್ಷೇತ್ರದ ಮೊಕ್ತೇಸರ ಎನ್.ದಾಮೋದರ ಮಣಿಯಾಣಿ, ಆಡಳಿತ ಸಮಿತಿ ಸದಸ್ಯರುಗಳಾದ ರಾಜಗೋಪಾಲ ಭಟ್ ಬಿ, ಪದ್ಮನಾಭ ಕುಳದಪಾರೆ, ಚಂದ್ರಶೇಖರ ರೈ ಬಜ, ವಿಶ್ವನಾಥ ಮಂಜತ್ತೂರುರವರುಗಳ ಪ್ರಕಟಣೆ ತಿಳಿಸಿದೆ.
ಕ್ಷೇತ್ರೇಶ ಸ್ಥಾನದ 25 ರ ಸಂಭ್ರಮ, ಅಭಿನಂದನಾ ಕಾರ್ಯಕ್ರಮ
ನಾಕೂರು ಮನೆತನದ ಎನ್. ದಾಮೋದರ ಮಣಿಯಾಣಿಯವರು ಶ್ರೀ ಕ್ಷೇತ್ರದ ಕ್ಷೇತ್ರೇಶ ಸ್ಥಾನ (ಮೊಕ್ತೇಸರ) ವನ್ನು ಸ್ವೀಕರಿಸಿ 25 ಸಂವತ್ಸರಗಳು ಪೂರೈಸಿರುವ ಹಿನ್ನೆಲೆಯಲ್ಲಿ ಶ್ರೀ ಭೂತಬಲಿ ಉತ್ಸವದೊಂದಿಗೆ ಕ್ಷೇತ್ರೇಶ ಸ್ಥಾನದ 25 ರ ಸಂಭ್ರಮ ಕಾರ್ಯಕ್ರಮ ಕೂಡ ನಡೆಯಲಿದೆ. ಕಾರ್ಯಕ್ರಮದ ವಿಶೇಷತೆಯಾಗಿ ಮೇ.02 ರಂದು ಸಂಜೆ ಕ್ಷೇತ್ರಾಚಾರ್ಯ ವಾಸುದೇವ ತಂತ್ರಿಗಳು ಕುಂಟಾರು, ಗೋಪಾಲಕೃಷ್ಣ ಅಡಿಗರು ಕುಂಬಳೆ, ಕ್ಷೇತ್ರದ ಪ್ರಧಾನ ಅರ್ಚಕ ರಾಮ್ಪ್ರಸಾದ್ ಕೇಕುಣ್ಣಾಯ ನೆಟ್ಟಣಿಗೆ ಹಾಗೂ ಕ್ಷೇತ್ರದ ಖಾಯಂದಾರರಾದ 55 ಮಂದಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.