- ಈದ್ ಸಂಭ್ರಮದ ಹೊಸ್ತಿಲಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಹಸ್ತಾಂತರ
ಪುತ್ತೂರು: ಇ ಫೌಂಡೇಶನ್ ಇಂಡಿಯಾ ವತಿಯಿಂದ ಇ ಆಸರೆ ಯೋಜನೆಯಡಿಯಲ್ಲಿ ಸವಣೂರು ಬಸ್ತಿಮೂಲೆಯಲ್ಲಿ ವಿಧವೆ ಮಹಿಳೆಗೆ ಮನೆ ನಿರ್ಮಿಸಿಕೊಟ್ಟು ಬಡ ಕುಟುಂಬದ ಪಾಲಿಗೆ ಆಸರೆಯಾಗಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ಮಹಿಳೆಯ ಮನೆಯ ಪರಿಸ್ಥಿತಿಯನ್ನು ಗಮನಿಸಿದ ಇ ಫೌಂಡೇಶನ್ ಇಂಡಿಯಾ ಸಮಿತಿಯ ಪದಾಧಿಕಾರಿಗಳು ಕುಟುಂಬಕ್ಕೊಂದು ಸುಸಜ್ಜಿತ ಮನೆಯನ್ನು ನಿರ್ಮಿಸಿ ಕೊಡಲು ಕೆಲವು ಸಮಯಗಳ ಹಿಂದೆ ತೀರ್ಮಾನಿಸಿದ್ದರು. ಅದರಂತೆ ಎಲ್ಲಾ ವ್ಯವಸ್ಥೆಗಳನ್ನೊಳಗೊಂಡಿರುವ ಉತ್ತಮ ಸೌಕರ್ಯದ ಮನೆಯನ್ನು ನಿರ್ಮಿಸಿ ಮೇ.೧ರಂದು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ವಿಧವೆ ಮಹಿಳೆ ಮತ್ತು ಮಕ್ಕಳು ಈದ್ ಹಬ್ಬದ ಸಂಭ್ರಮವನ್ನು ಹೊಸ ಮನೆಯಲ್ಲಿ ಆಚರಿಸುವಂತಾಗಲಿ ಎನ್ನುವ ಉದ್ದೇಶಕ್ಕೆ ಈದ್ ಹಬ್ಬದ ಮೊದಲೇ ಮನೆಯನ್ನು ಹಸ್ತಾಂತರಿಸಿದ್ದೇವೆ ಎಂದು ಈ ಫೌಂಡೇಶನ್ ಇಂಡಿಯಾದ ಮುಖಂಡರು ತಿಳಿಸಿದರು.
ಮನೆಯ ಕೀ ಹಸ್ತಾಂತರಿಸಿದ ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಮಾತನಾಡಿ ಅರ್ಹ ಕುಟುಂಬದ ಸಂಕಷ್ಟ ಅರಿತು ಮನೆ ನಿರ್ಮಿಸಿಕೊಟ್ಟ ಇ ಫೌಂಡೇಶನ್ ಇಂಡಿಯಾದವರ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.
ಹೈದರ್ ಚಾಯ್ಸ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಚಾಪಳ್ಳ ಜುಮಾ ಮಸೀದಿ ಖತೀಬ್ ಅಶ್ರಫ್ ಬಾಖವಿ, ಚಾಪಳ್ಳ ಮಸೀದಿಯ ಅಧ್ಯಕ್ಷ ಉಮ್ಮರ್ ಹಾಜಿ ಕೆನರಾ, ಸವಣೂರು ಗ್ರಾ.ಪಂ ಸದಸ್ಯರಾದ ರಫೀಕ್ ಎಂ.ಎ, ರಝಾಕ್ ಕೆನರಾ ಉಪಸ್ಥಿತರಿದ್ದರು.
ಇಮ್ತಿಯಾಝ್ ಸ್ವಾಗತಿಸಿದರು. ಆರಿಫ್ ಸಾಲ್ಮರ ವಂದಿಸಿದರು. ಇ ಫೌಂಡೇಶನ್ ಇಂಡಿಯಾ ಸಮಿತಿಯು ಕೆಲವು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದೆ. ಪ್ರತೀ ವರ್ಷದಂತೆ ಈ ಬಾರಿ ಕೂಎಆ ರಂಝಾನ್ ತಿಂಗಳು ಪುತ್ತೂರಿನ ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆ ತಂಗುವ ಉಪವಾಸಿಗರಿಗೆ ಇಫ್ತಾರ್ ಹಾಗೂ ಸಹರಿ ವ್ಯವಸ್ಥೆಯನ್ನು ಮಾಡಿದ್ದರು.