- ರಾಜ್ಯ ಸರ್ಕಾರದ ಜನ ವಿರೋಧಿ ನಡೆಯನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಬೇಕಾಗಿದೆ-ಮಂಜುನಾಥ ಭಂಡಾರಿ
ಉಪ್ಪಿನಂಗಡಿ: ಅಂತ್ಯ ಸಂಸ್ಕಾರ ನಿಧಿಯಂತಹ ಸರ್ಕಾರಿ ಸವಲತ್ತುಗಳನ್ನು ಸದ್ದಿಲ್ಲದೆ ಸ್ಥಗಿತಗೊಳಿಸಿದ, 9\11 ಪ್ರಕ್ರಿಯೆಯನ್ನು ಗ್ರಾಮ ಪಂಚಾಯಿತಿ ಆಡಳಿತದಿಂದ ಜಿಲ್ಲಾ ಕೇಂದ್ರಕ್ಕೆ ವರ್ಗಾಹಿಸಿ ಗ್ರಾಮೀಣ ಜನರನ್ನು ಅಲೆದಾಡಿಸುವಂತೆ ಮಾಡಿದ ರಾಜ್ಯ ಸರ್ಕಾರದ ಜನವಿರೋಧಿ ನಡೆಯನ್ನು ಜನ ಸಾಮಾನ್ಯರಿಗೆ ಮನದಟ್ಟುಗೊಳಿಸುವ ಕಾರ್ಯ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಅವರು ಮೇ. ೬ರಂದು ಉಪ್ಪಿನಂಗಡಿಯಲ್ಲಿ ಆಯೋಜಿಸಲಾದ ಕಾಂಗ್ರೇಸ್ ಪಕ್ಷ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರುಗಳು, ಅಭ್ಯರ್ಥಿಗೊಂದಿಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಅಕ್ರಮ ಸಕ್ರಮದಡಿ ಮಂಜೂರಾದ ಭೂಮಿಯನ್ನು ಪ್ಲಾಟಿಂಗ್ ಮಾಡದೇ ಕನ್ವರ್ಷನ್ ಮಾಡುತ್ತಿಲ್ಲ, ಬಾಪೂಜಿ ಕೇಂದ್ರದಲ್ಲಿ ದೊರೆಯುತ್ತಿದ್ದ ಸೌಲಭ್ಯಗಳೂ ದೊರೆಯುತ್ತಿಲ್ಲ. ಸುಲಭವಾಗಿ ಲಭಿಸುತ್ತಿದ್ದ ಸೇವೆಗಳನ್ನು ಕಷ್ಟ ಭರಿಸಿ ಲಭಿಸುವಂತೆ ಮಾಡಲಾಗಿದೆ ಈ ಬಗ್ಗೆ ಜನ ಸಾಮಾನ್ಯರ ಭಾವನೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಕಾಂಗ್ರೆಸ್ಸಿನ ಈ ಹೋರಾಟವನ್ನು ಜನತೆಗೆ ತಿಳಿಸುವ ಕಾರ್ಯವೂ ಕಾರ್ಯಕರ್ತರಿಂದ ನಡೆಯಬೇಕಾಗಿದ್ದು, ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಪಂಚಾಯಿತಿ ಸದಸ್ಯರುಗಳಿಂದ ಮಾತ್ರ ಈ ಕೆಲಸ ಸಾಧ್ಯ ಎಂದ ಅವರು ಈ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳಬೇಕು ಎಂದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರೂ ಆಗಿರುವ ಹರೀಶ್ ಕುಮಾರ್ ಮಾತನಾಡಿ ಬೂತ್ ಅಧ್ಯಕ್ಷರು, ಕಾರ್ಯಕರ್ತರು ಗ್ರಾಮೀಣ ಭಾಗದ ಜನರಿಗೆ ಎದುರಾಗಿರುವ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳಬೇಕು ಎಂದರು.
ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊನಾಡು ಮಾತನಾಡಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪಕ್ಷದ ಮುಖಂಡರಾದ ಎಂ.ಎಸ್. ಮಹಮ್ಮದ್, ಜೋಕಿಂ ಡಿ”ಸೋಜಾ, ಸೋಮನಾಥ, ಉಮಾನಾಥ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ಸಂತೋಷ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ಅಬ್ದುಲ್ ರಹಿಮಾನ್, ಜಯಪ್ರಕಾಶ್ ಬದಿನಾರು, ಜಗನ್ನಾಥ್ ಶೆಟ್ಟಿ ನಡುಮನೆ, ಗೀತಾ ದಾಸರಮೂಲೆ, ಸತೀಶ್ ಶೆಟ್ಟಿ ಹೆನ್ನಾಳ, ಪಕ್ಷದ ಕಾರ್ಯಕರ್ತರಾದ ಸೇಸಪ್ಪ ನೆಕ್ಕಿಲು, ಹರಿಪ್ರಸಾದ್ ಶೆಟ್ಟಿ, ಅಭಿಪ್ರಾಯ ಮಂಡಿಸಿ ಮಾತನಾಡಿ ಪಕ್ಷದ ನಾಯಕರು ಪಕ್ಷದ ಕಾರ್ಯಕರ್ತರೊಡನೆ ವ್ಯವಹರಿಸುವ ರೀತಿಯನ್ನು ಬದಲಾಯಿಸಬೇಕು, ಅಧಿಕಾರ ಲಭಿಸಿದಾಕ್ಷಣ ಪ್ರತ್ಯಕ್ಷಗೊಳ್ಳುವ ನಾಯಕರನ್ನು ಬದಿಗಿಟ್ಟು, ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ, ಗೌರವ ನೀಡುವಂತಾಗಬೇಕು ಎಂದು ಮುಖಂಡರಿಗೆ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ವಿದ್ಯಾಲಕ್ಷ್ಮಿ ಪ್ರಭು, ಯು.ಟಿ. ಮಹಮ್ಮದ್ ತೌಸೀಫ್, ಯು.ಕೆ. ಇಬ್ರಾಹಿಂ, ಸವಿತಾ ಹರೀಶ್, ಸುನಿಲ್ ನೆಲ್ಸನ್ ಪಿಂಟೊ, ಪಕ್ಷದ ಕಾರ್ಯಕರ್ತರಾದ ನಝೀರ್ ಮಠ, ಸಿದ್ದಿಕ್ ಕೆಂಪಿ, ಬಾಬು ಅಗರಿ, ಅಬ್ದುಲ್ಲ ಪೆರ್ನೆ, ಉಮೇಶ್ ಅಮೀನ್, ವೆಂಕಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಸ್ವಾಗತಿಸಿ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್ ವಂದಿಸಿದರು.