ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಾರಾಡಿ, ಕೊಂಬೆಟ್ಟು, ಕುಂಬ್ರ, ಕೆಯ್ಯೂರು ಸರಕಾರಿ ಶಾಲೆಗಳಲ್ಲಿ ಒಟ್ಟು ರೂ. 7 ಕೋಟಿಯ ಕಟ್ಟಡ ಕಾಮಗಾರಿಗಳ, ರೂ.5 ಕೋಟಿಯ ಫರ್ನಿಚರ್, ಮೂಲಭೂತ ಸೌಕರ್ಯಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಮೇ 20 ರಂದು ಪುತ್ತೂರಿಗೆ ಆಗಮಿಸುವ ಹಿನ್ನಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಮೇ 15 ರಂದು ಹಾರಾಡಿ, ಕೊಂಬೆಟ್ಟು ಶಾಲೆಗಳಲ್ಲಿ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆ ನಡೆಸಿದರು.
ಕೊಂಬೆಟ್ಟು ಶಾಲೆಯಲ್ಲಿ ನಡೆದ ಪೂರ್ವ ಸಿದ್ದತಾ ಸಭೆ ಬಳಿಕ ಪತ್ರಿಕಾ ಮಾಧ್ಯಮದವರ ಜೊತೆ ಶಾಸಕರು ಮಾತನಾಡಿ ಶಿಕ್ಷಣ ಸಚಿವರು ಪುತ್ತೂರಿಗೆ ಭೇಟಿ ನೀಡುವ ಹಿನ್ನಲೆಯಲ್ಲಿ ಪೂರ್ವ ಸಿದ್ದತಾ ಸಭೆ ಮಾಡಲಾಗಿದೆ. ಹಾರಾಡಿಯಲ್ಲಿ ಕಟ್ಟಡ ಲೋಕಾರ್ಪಣೆ, ಫರ್ನಿಚರ್ ಬಿಡುಗಡೆ, ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ರೂ.1.60 ಕೋಟಿ ವೆಚ್ಚದ ಕಟ್ಟಡ ಲೋಕಾರ್ಪಣೆ ಮತ್ತು ಪಾರಂಪರಿಕ ಕಟ್ಟಡ, ಮೂಲಭೂತ ಸೌಕರ್ಯಗಳ ಉದ್ಘಾಟನೆ, ಕುಂಬ್ರ ಕೆಪಿಎಸ್ ಕಾಲೇಜಿನಲ್ಲಿ ರೂ.2ಕೋಟಿಯ ಕಟ್ಟಡ ಲೋಕಾರ್ಪಣೆ, ಕೆಯ್ಯೂರಿನಲ್ಲಿ ರೂ.2 ಕೋಟಿಯ ಕಟ್ಟಡ ಕೆಪಿಎಸ್ ಶಾಲೆಗೆ ಶಿಲಾನ್ಯಾಸವನ್ನು ಶಿಕ್ಷಣ ಸಚಿವರು ನೆರವೇರಿಸಲಿದ್ದಾರೆ ಎಂದರು. ಕೊಂಬೆಟ್ಟು ಶಾಲಾ ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪ.ಪೂ ಕಾಲೇಜಿನ ಪ್ರಾಂಶುಪಾಲ ಸುರೇಶ್, ಪೌಢಶಾಲಾ ವಿಭಾಗದ ಪ್ರಾಂಶುಪಾಲ ವಸಂತ್ ಸೇರಿದಂತೆ ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು, ಶಿಕ್ಷರು ಉಪಸ್ಥಿತರಿದ್ದರು. ಹಾರಾಡಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ನಗರಸಭೆ ಸ್ಥಳೀಯ ಸದಸ್ಯೆ ಪ್ರೇಮಲತಾ ನಂದಿಲ, ಗೌರಿ ಬನ್ನೂರು, ಮೋಹಿನಿ ವಿಶ್ವನಾಥ್, ಪದ್ಮನಾಭ ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಲೋಕೇಶ್, ಶಾಲಾ ಮುಖ್ಯಗುರು ಕುಕ್ಕ, ಎಸ್ ಡಿ ಎಮ್ ಸಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.