- ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಗುರಿಯಿದ್ದಾಗ ಭವಿಷ್ಯ ಉಜ್ವಲ-ಎ.ಜೆ ರೈ
ಪುತ್ತೂರು: ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ಮುಂದಾಲೋಚನೆ ಹಾಗೂ ಶಿಕ್ಷಣಕ್ಕೆ ನೀಡಿದ ಕೊಡುಗೆಯಿಂದ ಸಾವಿರಾರು ವಿದ್ಯಾರ್ಥಿಗಳು ಇಂದು ಸೊಗಸಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಗುರಿಯಿದ್ದಾಗ ಗುರುಗಳು ಖಂಡಿತಾ ಸಹಕಾರ ನೀಡುತ್ತಾರೆ. ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು ಜೊತೆಗೆ ಶಾಲೆಯನ್ನು ಸ್ವಚ್ಛತೆಯಿಂದ ನೋಡಿಕೊಳ್ಳಬೇಕು ಎಂದು ಶಾಲಾ ಹಿರಿಯ ವಿದ್ಯಾರ್ಥಿ ಎ.ಜೆ ರೈರವರು ಹೇಳಿದರು.
ಕರ್ನಾಟಕ ಸರಕಾರವು 2022-23ನೇ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕಾ ವರ್ಷ’ವೆಂದು ಘೋಷಿಸಿದ್ದು, ಅದರಂತೆ ಮೇ 19 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯ 8,9,10ನೇ ತರಗತಿಗಳ ಪ್ರಾರಂಭೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಹೆತ್ತವರು ತಮ್ಮ ಸುಖ-ಸಂತೋಷಕ್ಕಿಂತ ತಮ್ಮ ಮಕ್ಕಳಿಗೆ ಎಲ್ಲವನ್ನೂ ನೀಡಿ ತ್ಯಾಗದ ಮನೋಭಾವನೆ ಹೊಂದಿರುತ್ತಾರೆ.ವಿದ್ಯಾರ್ಥಿಗಳು ಜೀವನದ ಪಾಠ, ಮಾನವೀಯ ಮೌಲ್ಯ, ಮಾತಿನಲ್ಲಿ ಹಾಗೂ ನಡೆಯಲ್ಲಿ ವಿನಯಶೀಲತೆ, ವಿಧೇಯತೆ, ಒಳ್ಳೆ ಮನಸ್ಸಿನ, ಒಳ್ಳೆ ಹೃದಯವಂತ ಗುಣಗಳನ್ನು ಅಳವಡಿಸಿಕೊಳ್ಳಿ. ಶೈಕ್ಷಣಿಕ ವರ್ಷವೂ ಯಾವುದೇ ಅಡೆ-ತಡೆಗಳಿಂದ, ಕೆಡುಕುಗಳಿಂದ ಭಗವಂತ ರಕ್ಷಿಸಲಿ ಎಂದು ಹೇಳಿ ಶುಭ ಹಾರೈಸಿದರು.
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಎನ್.ಕೆ ಜಗನ್ನೀವಾಸ್ ರೈ ಮಾತನಾಡಿ, ಕೊರೋನಾದಿಂದ ಕಲಿಕೆಗೆ ಅಷ್ಟೊಂದು ಆದ್ಯತೆ ಕೊಡಲು ಸಾಧ್ಯವಾಗದ ನಿಟ್ಟಿನಲ್ಲಿ ಪ್ರಸ್ತುತ ವರ್ಷ ಸರಕಾರವು ಕಲಿಕಾ ಚೇತರಿಕಾ ವರ್ಷ ಎಂಬ ಧ್ಯೇಯವಾಕ್ಯ ನೀಡಿದೆ. ಫಿಲೋಮಿನಾ ಸಂಸ್ಥೆಗೆ ಸಮಾಜದಲ್ಲಿ ಗೌರವದ ಸ್ಥಾನ ಪಡೆದಿದೆ. ಇಂದಿನ ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅಧ್ಯಯನಶೀಲತೆಯನ್ನು, ಮನಸ್ಸಿನ ಹಿಡಿತವನ್ನು ಮೈಗೂಡಿಸಿಕೊಳ್ಳಿ. ಮೊಬೈಲನ್ನು ದೂರೀಕರಿಸಿ, ಶಿಕ್ಷಣದ ಕಡೆಗೆ ಹೆಚ್ಚಿನ ಒತ್ತು ನೀಡಿ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಪ್ರಕೃತಿಯಿಂದ ಬಿರುಸಿನ ಮಳೆಯಿಂದಾಗಿ ವಾತಾ ವರಣ ಬಿಸಿಲ ಬೇಗೆಯಿಂದ ತಂಪಗಿನ ವಾತಾವರಣವನ್ನು ಕಲ್ಪಿಸಿದೆ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಾಗೂ ಪ್ರೌಢ ಹೀಗೆ ಎರಡು ಹಂತಗಳಿವೆ. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರಾಥಮಿಕ ಹಂತದ ವ್ಯಕ್ತಿತ್ವದಿಂದ ಹೊರಬರಬೇಕಾಗುತ್ತದೆ. ಈ ಶಾಲೆಯ ಅಭಿವೃದ್ಧಿ ಜೊತೆಗೆ ವಿದ್ಯಾರ್ಥಿಗಳ ಅಭಿವೃದ್ಧಿಯೂ ಆಗಬೇಕಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ದೃಢಚಿತ್ತವಿಟ್ಟು ಕಲಿಕೆಯನ್ನು ಮುಂದುವರೆಸಿ ಎಂದು ಹೇಳಿ ಶುಭ ಹಾರೈಸಿದರು.
ವಿದ್ಯಾರ್ಥಿ ವೃಂದ ಪ್ರಾರ್ಥಿಸಿದರು. ವಿದ್ಯಾರ್ಥಿ ಪ್ರತಿನಿಧಿ ಅನುಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಯಿಸ್ ಸ್ವಾಗತಿಸಿ, ವಿದ್ಯಾರ್ಥಿನಿ ಸಕೀನಾ ವಂದಿಸಿದರು.ಶಿಕ್ಷಕರಾದ ಬೆನೆಟ್ ಮೊಂತೇರೋ, ಕ್ಲೆಮೆಂಟ್ ಪಿಂಟೋ, ಆಶಾ ರೆಬೆಲ್ಲೋ,ಮೋಲಿ ಫೆರ್ನಾಂಡೀಸ್ ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ರಚನಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.