- ಕಠಿಣ ಶ್ರಮ, ದುಡಿಮೆ ಹಾಗೂ ಸರ್ವ ಸಮನ್ವಯತೆಯಿಂದ ರವಿ ಶೆಟ್ಟಿಯವರು ಸಾಧನೆ ಮಾಡಿದ್ದಾರೆ-ಪ್ರೊ.ಬಿ.ಎ ವಿವೇಕ ರೈ
ಪುತ್ತೂರು: ಮೂಡಂಬೈಲು ಡಾ.ರವಿ ಶೆಟ್ಟಿಯವರ ಜೀವನ ಕ್ರಮವೇ ಒಂದು ವಿಶೇಷವಾಗಿದ್ದು ಹಳ್ಳಿ ಪ್ರದೇಶದಿಂದ ಬಂದು ಇಂದು ಸಮಾಜ ಸೇವೆ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ. ಕಠಿಣ ಶ್ರಮ, ದುಡಿಮೆ ಹಾಗೂ ಸರ್ವ ಸಮನ್ವಯತೆಯಿಂದ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯ ಎಂದು ಹಿರಿಯ ವಿಧ್ವಾಂಸ, ವಿಶ್ರಾಂತ ಕುಲಪತಿ ಪ್ರೊ.ಬಿ.ಎ ವಿವೇಕ ರೈ ಹೇಳಿದರು.
ಮುಂಬಯಿ ವಿ.ವಿ ಕನ್ನಡ ವಿಭಾಗ, ಮೂಡಂಬೈಲು ನೇಸರ ಫೌಂಡೇಶನ್ ಹಾಗೂ ಐಲೇಸಾ ದ ವಾಯ್ಸ್ ಆಫ್ ಓಷನ್ ಆಶ್ರಯದಲ್ಲಿ ಮೇ.21ರಂದು ಪುತ್ತೂರು ದರ್ಬೆ ಪ್ರಶಾಂತ್ ಮಹಲ್ನಲ್ಲಿ ನಡೆದ ಅನಿವಾಸಿ ಉದ್ಯಮಿ, ಸಾಂಸ್ಕೃತಿಕ ಸಂಘಟಕ ಮೂಡಂಬೈಲು ಡಾ. ರವಿ ಶೆಟ್ಟಿ ಅವರ ಜೀವನ ಚಿತ್ರಣ ಆಧರಿಸಿದ `ರವಿತೇಜ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರವಿತೇಜ ಕೃತಿಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಪುಸ್ತಕ ಹೊರ ತರುವಲ್ಲಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಹಾಗೂ ಮಿಥಾಲಿ ಪ್ರಸನ್ನ ರೈ ಅವರ ಪ್ರಯತ್ನ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾರ್ಥ ಬಿಟ್ಟು ಸಮಾಜ್ಕಕಾಗಿ ಕೆಲಸ ಮಾಡಿದ್ದಾರೆ-ಸರ್ವೋತ್ತಮ ಶೆಟ್ಟಿ
ಡಾ.ರವಿ ಶೆಟ್ಟಿ ಮೂಡಂಬೈಲು ಅವರು ಇಂಗ್ಲೀಷಿಗೆ ಅನುವಾದಿಸಿದ `100 ಸುಭಾಷಿತಗಳು’ ಕೃತಿಯನ್ನು ಬಿಡುಗಡೆ ಮಾಡಿದ ಅನಿವಾಸಿ ಉದ್ಯಮಿ ಸರ್ವೋತ್ತಮ ಶೆಟ್ಟಿ ಮಾತನಾಡಿ ರವಿ ಶೆಟ್ಟಿಯವರು ಸ್ವಾರ್ಥ ಬಿಟ್ಟು ಸಮಾಜ್ಕಕಾಗಿ ಕೆಲಸ ಮಾಡಿದ್ದರಿಂದ ಇಂದು ಉನ್ನತ ಮಟ್ಟಕ್ಕೆ ತಲುಪಿದ್ದು ಅರಬ್ ರಾಷ್ಟ್ರದಲ್ಲೂ ತುಳು ಮತ್ತು ಕನ್ನಡವನ್ನು ಬೆಳೆಸುವಲ್ಲಿ ರವಿ ಶೆಟ್ಟಿಯವರ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.
ಲಾಭದ ಉದ್ದೇಶಕ್ಕೆ ಯಾವ ಕಾರ್ಯವನ್ನೂ ರವಿ ಶೆಟ್ಟಿಯವರು ಮಾಡಿಲ್ಲ-ನರೇಂದ್ರ ರೈ
ಕೃತಿ ಪರಿಚಯ ಮಾಡಿದ ಲೇಖಕರಾದ ಡಾ.ನರೇಂದ್ರ ರೈ ದೇರ್ಲ ಮಾತನಾಡಿ ರವಿ ಶೆಟ್ಟಿಯವರು ತಮ್ಮ ಸತತ ಪ್ರಯತ್ನದಿಂದಾಗಿ ಜೀವನದಲ್ಲಿ ಸಾಧನೆ ಮಾಡಿದ್ದಾರೆ. ರವಿ ಶೆಟ್ಟಿಯವರು ಸಮಾಜಕ್ಕಾಗಿ ತನ್ನ ಕೊಡುಗೆಯನ್ನು ನೀಡಿದ್ದು ಲಾಭದ ಉದ್ದೇಶದಿಂದ ಯಾವ ಕಾರ್ಯವನ್ನೂ ಅವರು ಮಾಡಿಲ್ಲ ಎಂದು ಅವರು ಹೇಳಿದರು.
ಪದ್ಮಭೂಷಣ, ಪದ್ಮಶ್ರೀ ಒಲಿದು ಬರಲಿ-ಶಕುಂತಳಾ ಶೆಟ್ಟಿ
ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಹಳ್ಳಿಯಿಂದ ಹೋದ ರವಿ ಶೆಟ್ಟಿಯವರು ನಿಸ್ವಾರ್ಥ ಸಮಾಜ ಸೇವೆ ಮಾಡಿದ್ದು ಪ್ರಚಾರಕ್ಕೆ ಬೇಕಾಗಿ ಅವರು ಏನನ್ನೂ ಮಾಡಿಲ್ಲ. ಉದ್ಯಮದ ಮೂಲಕ 2೦೦೦ ಕುಟುಂಬಗಳಿಗೆ ಅನ್ನದಾತರಾಗಿರುವ ಇವರ ಸಾಧನೆ ಅನನ್ಯವಾದುದು. ನಿಮ್ಮ ಸಾಧನೆಗೆ ಮುಂದಿನ ದಿನಗಳಲ್ಲಿ ಎಂದು ಅವರು ಹಾರೈಸಿದರು.
ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವ-ತುಕಾರಾಮ ಪೂಜಾರಿ
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕ ತುಕಾರಾಮ ಪೂಜಾರಿ ಮಾತನಾಡಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸಾಧನೆ ಮಾಡಿರುವ ರವಿ ಶೆಟ್ಟಿಯವರ ಸಮಾಜ ಸೇವೆ ಮತ್ತು ಪ್ರಮಾಣಿಕತೆಯನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಇವರ ಸಾಧನೆ ಇಡೀ ರಾಜ್ಯದಲ್ಲಿ ಪಸರಿಸಬೇಕು ಎಂದ ಅವರು ರವಿ ಶೆಟ್ಟಿಯವರ ಸಾಧನೆಯ ಅರ್ಧ ಭಾಗ ಪತ್ನಿ ಜ್ಯೋತಿಯವರಿಗೆ ಸಲ್ಲಬೇಕು ಎಂದು ಹೇಳಿದರು.
ಪ್ರೋತ್ಸಾಹ ನೀಡುತ್ತಿರುವ ಪ್ರತಿಯೊಬ್ಬರಿಗೂ ನಾನು ಆಭಾರಿ-ಡಾ|ರವಿ ಶೆಟ್ಟಿ
ಡಾ.ರವಿ ಶೆಟ್ಟಿ ಮೂಡಂಬೈಲು ಮಾತನಾಡಿ ರವಿತೇಜ ಪುಸ್ತಕವನ್ನು ಮುಂಬಯಿ ವಿಶ್ವ ವಿದ್ಯಾಲಯ ಮುಖಾಂತರ ಹೊರ ತಂದಿರುವುದು ನನ್ನ ಪಾಲಿನ ಸೌಭಾಗ್ಯವಾಗಿದೆ. ಮನೆಯವರ, ಹಿತೈಷಿಗಳ, ಸ್ನೇಹಿತರ ಮತ್ತು ಬಂಧು ಮಿತ್ರರ ಪ್ರೋತ್ಸಾಹ ನನಗೆ ಲಭಿಸುತ್ತಿದ್ದು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ದೇವರು ಕೊಟ್ಟ ಶಕ್ತಿಯಿಂದ ಅಲ್ಪ ಕೊಡುಗೆಯನ್ನು ಸಮಾಜಕ್ಕಾಗಿ ವಿನಿಯೋಗಿಸುತ್ತಿದ್ದೇನೆ ಎಂದು ಹೇಳಿದರು. ಕತಾರ್ ನನ್ನ ಕರ್ಮಭೂಮಿಯಾಗಿದ್ದು ಅದನ್ನು ಮರೆಯಲು ಸಾಧ್ಯವಿಲ್ಲ, ನನಗೆ ಪ್ರೋತ್ಸಾಹ ನೀಡುತ್ತಿರುವ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಡಾ.ರವಿ ಶೆಟ್ಟಿ ಹೇಳಿದರು.
ಕನ್ನಡ, ತುಳುವಿಗಾಗಿ ಕೊಡುಗೆ ನೀಡಿದ್ದಾರೆ-ಹೆಬ್ಬಾರ್
ಅಧ್ಯಕ್ಷತೆ ವಹಿಸಿದ್ದ ಮೊಡಂಕಾಪು ದೀಪಿಕಾ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಮಾತನಾಡಿ ಕನ್ನಡ ಮತ್ತು ತುಳು ಭಾಷೆಗಾಗಿ ಡಾ.ರವಿ ಶೆಟ್ಟಿಯವರು ಅಪಾರ ಕೊಡುಗೆ ನೀಡಿದ್ದು ಅವರ ಕುರಿತಾದ ಪುಸ್ತಕ ಹೊರತರುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು.
ಪ್ರತಿ ಹಸ್ತಾಂತರ:
ರವಿತೇಜ ಪುಸ್ತಕ ಮುದ್ರಿಸಿದ ನಾಗೇಶ್ರವರಿಗೆ, ಮುಖ ಪುಟ ವಿನ್ಯಾಸ ಮಾಡಿದ ಮೋನಪ್ಪರವರಿಗೆ ಹಾಗೂ ೧೦೧ ಸುಭಾಷಿತ ಪುಸ್ತಕ ಪರಿಶೀಲಿಸಿ ಬೆನ್ನುಡಿ ಬರೆದ ಶ್ರೀಶಕುಮಾರ್ರವರಿಗೆ ವೇದಿಕೆಯಲ್ಲಿ ಪುಸ್ತಕದ ಪ್ರತಿ ನೀಡಿ ಗೌರವಿಸಲಾಯಿತು.
ಪದ್ಮಶ್ರೀ ಹಾಜಬ್ಬರಿಗೆ ಸನ್ಮಾನ:
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಹಾಜಬ್ಬ ಮಾತನಾಡಿ ನನಗೆ ಪದ್ಮಶ್ರೀ ಸಿಗುವ ಮೊದಲೇ ಅಂದರೆ 2017ನೇ ಇಸವಿಯಲ್ಲಿ ಕತಾರ್ನಲ್ಲಿ ಡಾ.ರವಿ ಶೆಟ್ಟಿ ದಂಪತಿಗಳು ಆದರಾತಿಥ್ಯ ನೀಡಿದ್ದರು ಎಂದು ಸ್ಮರಿಸಿಕೊಂಡರು.
ಪೂರ್ಣಿಮಾ ಹಾಗೂ ಮಿಥಾಲಿಯವರಿಗೆ ಗೌರವಾರ್ಪಣೆ:
ಕನ್ನಡದಲ್ಲಿ ರವಿತೇಜ ಕೃತಿ ಬರೆದಿರುವ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿಯವರನ್ನು ಹಾಗೂ ಇಂಗ್ಲೀಷಿಗೆ ಅನುವಾದಿಸಿದ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಮಾಜಿ ಪ್ರಾಂಶುಪಾಲೆ ಮಿಥಾಲಿ ಪ್ರಸನ್ನ ರೈ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಹಾಗೂ ಮಿಥಾಲಿ ಪ್ರಸನ್ನ ರೈ ಅವರು ಸಭೆಯನ್ನುದೇಶಿಸಿ ಮಾತನಾಡಿದರು.
ಮುಂಬಯಿ ವಿ.ವಿ ಪರವಾಗಿ ಡಾ.ರವಿ ಶೆಟ್ಟಿಯವರಿಗೆ ಸನ್ಮಾನ:
ಮುಂಬಯಿ ವಿಶ್ವ ವಿದ್ಯಾಲಯ ಪರವಾಗಿ ಡಾ.ರವಿ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಗಾನ ಸೌರಭ:
ಐಲೇಸಾ ಸಾರಥಿ ಡಾ.ರಮೇಶ್ಚಂದ್ರ ತಂಡದವರಿಂದ ಗಾನ ಸೌರಭ ನಡೆಯಿತು. ನೂರಾರು ಮಂದಿ ಗಾನ ಸೌರಭ ವೀಕ್ಷಿಸಿದರು.
ಬ್ಯಾಂಡ್ ಕಲರವ, ಮೆರವಣಿಗೆ-ಪುಸ್ತಕ ಬಿಡುಗಡೆ
ಮೂರು ಕೃತಿಗಳನ್ನು ಹೊತ್ತ ಮೂರು ಪ್ರತ್ಯೇಕ ಪುಸ್ತಕ ಪೆಟ್ಟಿಗೆಯನ್ನು ಮೆರವಣಿಗೆ ಮೂಲಕ ವೇದಿಕೆಗೆ ತರಲಾಯಿತು. ಬ್ಯಾಂಡ್ ಕಲರವ ಮೆರವಣಿಗೆಗೆ ಮೆರುಗು ನೀಡಿತು. ಗಣ್ಯರು ಪುಸ್ತಕಗಳನ್ನು ಪ್ರದರ್ಶಿಸಿದರು. ಡಾ.ರವಿ ಶೆಟ್ಟಿಯವರ ತಾಯಿ ಸರೋಜಿನಿ ಶೆಟ್ಟಿ ಹಾಗೂ ಪತ್ನಿ ಜ್ಯೋತಿ ಶೆಟ್ಟಿ ಈ ವೇಳೆ ವೇದಿಕೆಯಲ್ಲಿದ್ದರು.
ಕವಿ ಶಾಂತಾರಾಮ ಶೆಟ್ಟಿ ಬೆಂಗಳೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ,ರವಿ ಶೆಟ್ಟಿಯವರ ಪತ್ನಿ ಜ್ಯೋತಿ ಶೆಟ್ಟಿ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಮಿಥಾಲಿ ಪ್ರಸನ್ನ ರೈ ಕಾರ್ಯಕ್ರಮ ನಿರ್ವಹಿಸಿದರು. ಸುರೇಂದ್ರ ಶೆಟ್ಟಿ ವಂದಿಸಿದರು.