ಉಪ್ಪಿನಂಗಡಿ: ಹದಿನೆಂಟನೇ ಶತಮಾನದಲ್ಲಿ ಉಪ್ಪಿನಂಗಡಿಗೆ ಆಗಮಿಸಿದ ಮುಕ್ರಿ ಮನೆತನದ ಮಂದಿಯನ್ನು ಒಗ್ಗೂಡಿಸುವ “ಮುಕ್ರಿ ಕುಟುಂಬಸ್ಥರ ಸಮ್ಮಿಲನ” ಮೇ. 28ರಂದು ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಮುಕ್ರಿ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಸುಹೈಲ್ ಉಪ್ಪಿನಂಗಡಿ ತಿಳಿಸಿದರು.
ಅವರು ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬೆಳಿಗ್ಗಿನಿಂದ ಸಂಜೆಯ ತನಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಕೊಯ್ಯೂರು ಅವರ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಕ್ರಿ ಕುಟುಂಬ ಸದಸ್ಯರುಗಳ ಜೀವನ, ಸಮಾಜಮುಖಿ ಸೇವೆಗಳ ಪರಿಚಯವನ್ನು ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಸಂಚಿಕೆಯನ್ನು ತರಲಾಗಿದ್ದು, ಇದರ ಬಿಡುಗಡೆ ಕಾರ್ಯಕ್ರಮ ನಡೆಲಿದೆ. ಮುಕ್ರಿ ಕುಟುಂಬ ಸದಸ್ಯರುಗಳ ಬರಹ, ಚಿತ್ರಕಲೆ ಪ್ರದರ್ಶನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇರುತ್ತದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯರ ಗುರುತಿಸುವಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ಜಲೀಲ್ ಮುಕ್ರಿ ಮಾಹಿತಿ ನೀಡಿ ಮಾತನಾಡಿ ಮುಕ್ರಿ ಕುಟುಂಬ ಸಮ್ಮಿಲನ ಇದು 3ನೇ ಒಗ್ಗೂಡುವಿಕೆ ಕಾರ್ಯಕ್ರಮವಾಗಿದ್ದು, ಇದು ಕೇವಲ ಕಾರ್ಯಕ್ರಮವೊಂದಕ್ಕೆ ಸೀಮಿತವಾಗಿರದೆ, ಇದರ ಅಡಿಯಲ್ಲಿ ಕೋವಿಡ್-19 ಸಂದರ್ಭದಲ್ಲಿ ಹಲವು ಸಮಾಜಮುಖಿ ಯೋಜನೆಗಳನ್ನು ಹಾಕಿಕೊಂಡು ಸಂಕಷ್ಠದಲ್ಲಿರುವವರಿಗೆ ಸಹಾಯ, ಸಹಕಾರ ನೀಡಿದೆ. ಅದಾಗ್ಯೂ ಬಡವರ ಮನೆ ನಿರ್ಮಾಣ, ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತಿದ್ದು, ಟ್ರಸ್ಟ್ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಕ್ರಿ ಫ್ಯಾಮಿಲಿ ಟ್ರಸ್ಟ್ ಖಜಾಂಚಿ ಶಮೀಮ್ ಇಬ್ರಾಹಿಂ, ಉಪಾಧ್ಯಕ್ಷ ಸಿದ್ದಿಕ್ ನೀರಾಜೆ ಉಪಸ್ಥಿತರಿದ್ದರು.