- ವಿವೇಕಾನಂದ ಸಂಸ್ಥೆಗಳು ಸಮಾಜದಲ್ಲಿ ಸಾಂಸ್ಥಿಕ ಗೌರವ ಪಡೆದಿವೆ – ಪಿ. ಶ್ರೀನಿವಾಸ ಪೈ
ಪುತ್ತೂರು: ಇಲ್ಲಿನ ತೆಂಕಿಲ ವಿವೇಕನಗರ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ಅಭಿನಂದನಾ ಕಾರ್ಯಕ್ರಮ ಮೇ 31 ರಂದು ಶಾಲಾ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ, ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಪಿ.ಶ್ರೀನಿವಾಸ್ ಪೈ, ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಜಿ ಅಚ್ಚುತ ನಾಯಕ್ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.
ಅಭಿಂದನೆ ಮಾಡಿದ ಪಿ. ಶ್ರೀನಿವಾಸ ಪೈ ಯವರು ಮಾತನಾಡಿ ‘ವಿವೇಕಾನಂದ ವಿದ್ಯಾಸಂಸ್ಥೆಗಳೆಂದರೆ ಒಂದು ಕಾಲದಲ್ಲಿ ಜನರು ಉಪೇಕ್ಷಿಸುವ ಕಾಲವಿತ್ತು. ಆದರೆ ಈಗ ದೃಷ್ಟಿಕೋನ ಬದಲಾಗಿದೆ. ಸಮಾಜದಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿಯ ಜೊತೆಗೆ ಶಿಕ್ಷಣ ನೀಡುವ ಸಂಸ್ಥೆ ಎಂಬ ಗೌರವ ಪಡೆದುಕೊಂಡಿವೆ. ನಮಗೆಲ್ಲಾ ಈ ಬಗ್ಗೆ ತುಂಬಾ ಹೆಮ್ಮೆಯಿದೆ ಎಂದು ಹೇಳಿ ಸಂಸ್ಥೆಯ ಏಳ್ಗೆಗಾಗಿ ಶ್ರಮಿಸಿ ಅಗಲಿರುವ ಚೇತನಗಳಾದ ಉರಿಮಜಲು ರಾಮ ಭಟ್, ನಾರಾಯಣ ರೈ, ಕರಿಯಾಲ ಶಿವರಾಮ ಭಟ್ ರವರನ್ನು ಸ್ಮರಿಸಿದರು.
625 ಪೂರ್ಣಾಂಕಗಳೊಂದಿಗೆ ರಾಜ್ಯದ ಪ್ರಥಮ ಸ್ಥಾನಿಗಳಾದ ಆತ್ಮೀಯ ಕಶ್ಯಪ್, ಅಭಯ್ ಶರ್ಮಾ ಮತ್ತು ಅಭಿಜ್ಞಾ ಆರ್., 624 ಪಡೆದ ಏಳು ಮಂದಿ ರಾಜ್ಯದ ದ್ವಿತೀಯ ಸ್ಥಾನಿಗಳನ್ನು, 623, 622, 621, 620 ಹಾಗೂ 600 ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಅತಿಥಿಗಳು ಗೌರವಿಸಿದರು.
ಶಾಲಾ ಸಂಚಾಲಕ ರವಿನಾರಾಯಣ ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯಕುಮಾರ್ ಜೈನ್, ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೊ. ಎ.ವಿ.ನಾರಾಯಣ, ರವಿ ಮುಂಗ್ಲಿಮನೆ, ಡಾ. ಸುರೇಶ್ ಪುತ್ತೂರಾಯ, ಬಿರ್ಮಣ್ಣ ಗೌಡ, ರವೀಂದ್ರ ಪಿ., ಆರ್.ಸಿ. ನಾರಾಯಣ, ರೂಪಲೇಖಾ, ಗೀತಾರವಿ, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರಕ್ಷಕ ಸಂಘದ ಸದಸ್ಯರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು, ಮುಖ್ಯಸ್ಥರುಗಳು, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡರು.
ಆರಂಭದಲ್ಲಿ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ, ಶ್ಲೋಕ, ನಿತ್ಯಪಂಚಾಂಗ, ಸುಭಾಷಿತ ನಡೆಯಿತು. ಅತಿಥಿಗಳು ದೀಪ ಬೆಳಗಿಸಿ, ಸರಸ್ವತಿ, ಓಂ ಹಾಗೂ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.