ಉಪ್ಪಿನಂಗಡಿ:ಮಹಿಳಾ ಪ್ರಯಾಣಿಕರೋರ್ವರು ಆಸನ ಕಾಯ್ದಿರಿಸಿದ್ದ, ಟಿಕೇಟ್ನಲ್ಲಿ ಸಮೂದಿಸಲ್ಪಟ್ಟ ನಂಬ್ರದ ಸೀಟ್ನಲ್ಲಿ ಪುರುಷ ಪ್ರಯಾಣಿಕನೋರ್ವ ಕುಳಿತಿರುವುದಲ್ಲದೆ, ಆಸನ ಬಿಟ್ಟು ಕೊಡಲು ವಿನಂತಿಸಿದ ಮಹಿಳಾ ಪ್ರಯಾಣಿಕರನ್ನೇ ಅವಾಚ್ಯ ಪದಗಳಿಂದ ನಿಂದಿಸಿ ಉದ್ಧಟತನ ಮೆರೆದಿರುವುದಲ್ಲದೆ, ಆತನ ಕೃತ್ಯವನ್ನು ತಡೆಗಟ್ಟದೇ ಮಹಿಳೆ ಅವಮಾನಿತಳಾಗಿ ಬಸ್ಸಿನಿಂದ ಇಳಿಯುವಂತೆ ಮಾಡಿದ ಬಸ್ ಸಿಬ್ಬಂದಿಗಳ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ಬ್ಯಾಟರಾಯ ಪುರದ ನಿವಾಸಿ ಮಹಿಳೆ ತನ್ನ ಎಳೆಯ ಪ್ರಾಯದ ಮಗನೊಂದಿಗೆ ಬಿಳಿಯೂರಿನಲ್ಲಿರುವ ಗೆಳತಿಯ ಮನೆಗೆ ಬಂದಿದ್ದವರು ಶನಿವಾರ ರಾತ್ರಿ ಬೆಂಗಳೂರಿಗೆ ಹಿಂತಿರುಗಲು ತನ್ನ ಗೆಳತಿಯ ಮೂಲಕವೇ ಬಸ್ ಟಿಕೆಟ್ ಕಾಯ್ದಿರಿಸಿದ್ದರು.ರತಿ ಟ್ರಾವೆಲ್ಸ್ ಸಂಸ್ಥೆಯ ಬಸ್ಸಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಈಕೆ ಉಪ್ಪಿನಂಗಡಿಯಲ್ಲಿ ಬಸ್ಸನ್ನೇರಿದಾಗ, ತಾನು ಕಾಯ್ದಿರಿಸಿದ ಸೀಟಿನಲ್ಲಿ ಬೇರೊಬ್ಬ ಪುರುಷ ಕುಳಿತಿದ್ದರು.ತಾನು ಕಾಯ್ದಿರಿಸಿದ ಸೀಟನ್ನು ತನಗೆ ಬಿಟ್ಟುಕೊಡುವಂತೆ ಆಕೆ ಆತನಲ್ಲಿ ವಿನಂತಿಸಿದರು. ಆದರೆ ಸೀಟನ್ನು ಬಿಟ್ಟು ಕೊಡದ ಪುರುಷ ಪ್ರಯಾಣಿಕ ಮಹಿಳೆಯನ್ನು ನಿಂದಿಸಿ ಅವಮಾನಿಸಿದಾಗ ನ್ಯಾಯ ದೊರಕಿಸುವಂತೆ ಬಸ್ಸಿನ ನಿರ್ವಾಹಕನಲ್ಲಿ ವಿನಂತಿಸಿದರು. ಬಸ್ಸಿನ ನಿರ್ವಾಹಕ ಒಂದು ಬಾರಿ ವಿನಂತಿಸಿದ್ದರೂ ಸ್ಪಂದಿಸದ ಆತನ ವಿರುದ್ದ ಯಾವುದೇ ಬಲವಂತಿಕೆಯ ಕ್ರಮ ಕೈಗೊಳ್ಳದೇ
ಭಯಭೀತಳಾದ ಮಹಿಳೆಯೇ ಅವಮಾನಿತಳಾಗಿ ಬಸ್ಸಿನಿಂದ ಇಳಿಯುವಂತೆ ವರ್ತಿಸಿದ್ದಾರೆಂದು ಆಪಾದಿಸಿ ಸಂತ್ರಸ್ತ ಮಹಿಳೆಯ ಪರವಾಗಿ ಆಕೆಯ ಬಿಳಿಯೂರಿನ ಗೆಳತಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪೂರಕ ದಾಖಲೆಯನ್ನು ಸಂಗ್ರಹಿಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ:
ಈ ಕೃತ್ಯವು ಹಿಂದೂ ಮಹಿಳೆಯೆಂದು ಅರಿತು ನಡೆಸಿದ ವ್ಯವಸ್ಥಿತ ಷಡ್ಯಂತ್ರವಾಗಿದೆ. ಇದಕ್ಕೆ ಹಲವರು ಸಹಕಾರ ನೀಡಿರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಪೊಲೀಸರು ಕೂಲಂಕುಷ ತನಿಖೆ ನಡೆಸಿ, ಈ ಪ್ರಕರಣದ ಆರೋಪಿಯನ್ನು ಹಾಗೂ ಅದಕ್ಕೆ ಬೆಂಬಲ ನೀಡಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆಯ ಉಪ್ಪಿನಂಗಡಿ ಘಟಕ ಆಗ್ರಹಿಸಿದೆ.