ನೆಲ್ಯಾಡಿ: ಬಜತ್ತೂರು ವಳಾಲು ಸರಕಾರಿ ಪ್ರೌಢಶಾಲೆಯಲ್ಲಿ ಪ್ರಕೃತ ಶೈಕ್ಷಣಿಕ ವರ್ಷದ ಮಳೆಬಿಲ್ಲು ಕಾರ್ಯಕ್ರಮದ ಪ್ರಯುಕ್ತ ‘ಇತಿಹಾಸ ಹಬ್ಬ’ ಆಚರಿಸಲಾಯಿತು.
ಇತಿಹಾಸ ಹಬ್ಬದ ಕಲ್ಪನೆಗೆ ಪೂರಕವಾಗಿ ಹಳೆಯ ಕೃಷಿ ಉಪಕರಣಗಳು ಮತ್ತು ಹಳೆಯ ಗೃಹೋಪಯೋಗಿ ವಸ್ತುಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಚಕ್ರಪಾಣಿಯವರು ಮಾತನಾಡಿ, ಹಳೆಯ, ಮೂಲೆ ಗುಂಪಾಗುತ್ತಿರುವ ವಸ್ತುಗಳನ್ನು ಜಾಗ್ರತೆಯಿಂದ ರಕ್ಷಿಸಿಕೊಂಡು ಬಂದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿ ಸಂಗ್ರಹ, ಪ್ರದರ್ಶನಗಳ ಮೂಲಕ ನಮ್ಮ ಸಾಂಪ್ರದಾಯಿಕ ಜೀವನಕ್ರಮ ಮತ್ತು ಕೃಷಿಯ ಸಲಕರಣೆಗಳ ಪರಿಚಯ ನೀಡಲು ಕಾರಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಪ್ರಭಾರ ಮುಖ್ಯಗುರು ಆನಿಯವರು ಕಾರ್ಯಕ್ರಮಕ್ಕೆ ಶುಭಕೋರಿದರು. ಶಿಕ್ಷಕಿ ಪುಷ್ಪಲತಾ ಎಂ., ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ರಾಘವೇಂದ್ರ ಕೆ ವಂದಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ಷಿತಿಜ ಸಮಾಜ ವಿಜ್ಞಾನ ಸಂಘದ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.