ಉಪ್ಪಿನಂಗಡಿ: ಕಾಲೇಜಿನ ಪ್ರಾಚಾರ್ಯರು ಕಾಲೇಜಿನ ನಿಯಾವಳಿಗಳನ್ನು ಉಲ್ಲಂಘಿಸಿ ಸ್ವಸ್ಥ್ಯ ವಾತಾವರಣಕ್ಕೆ ಧಕ್ಕೆ ತರುತ್ತಿರುವ ವಿದ್ಯಾರ್ಥಿಗಳ ಮೇಲೆ ಮೃಧು ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾಲೇಜಿನೊಳಗೆ ಹಿಜಾಬ್ ಧರಿಸಿ ಬರುವುದಕ್ಕೆ ವಿರೋಧಿಸುವ ವಿದ್ಯಾರ್ಥಿಗಳ ಗುಂಪು ಜೂ.3ರಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಧರಣಿ ನಡೆಸಿತು.
ಕಾಲೇಜಿನ ಪ್ರಾಚಾರ್ಯರು ಕಾಲೇಜಿನ ನಿಯಮಾವಳಿಗಳನ್ನು ಉಲ್ಲಂಘಿಸುವವರಿಗೆ ಬೆಂಬಲ ನೀಡುತ್ತಿದ್ದಾರೆ. ಹಾಗಾಗಿ ಎರಡು ಶಾಲುಗಳನ್ನು ತಲೆಗೆ ಹಿಜಾಬ್ನಂತೆ ಸುತ್ತಿಕೊಂಡು ವಿದ್ಯಾರ್ಥಿನಿಯರು ಕಾಲೇಜು ವರಾಂಡದೊಳಗೆ ನಿಯಮಾವಳಿಗಳನ್ನು ಅಣಕಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇವರಿಂದಾಗಿ ಪಾಠ – ಪ್ರವಚನಗಳಿಗೆ ತೊಂದರೆಯಾಗುತ್ತಿದೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬದಲು ಪ್ರಾಚಾರ್ಯರು ಅವರ ಮೇಲೆ ಮೃಧು ಧೋರಣೆ ನೀತಿ ಅನುಸರಿಸುತ್ತಿದ್ದಾರೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಶಾಸಕ ಸಂಜೀವ ಮಠಂದೂರು ಅವರು ಸ್ಥಳಕ್ಕೆ ಬರುವ ತನಕ ಧರಣಿ ಹಿಂದೆಗೆದುಕೊಳ್ಳದೇ ಕಾಲೇಜು ವರಾಂಡದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದರು.
ಏಕಾಏಕಿ ರಜೆ!: ಮೊನ್ನೆಯಿಂದ ಹಿಜಾಬ್ ಪರ ಇರುವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಾಠ- ಪ್ರವಚನಕ್ಕೆ ಅಡ್ಡಿ ಪಡಿಸುವುದು, ವರಾಂಡದಲ್ಲಿ ಗುಂಪು ಕೂಡಿ ಪ್ರತಿಭಟನೆ ನಡೆಸುವುದು, ವರದಿಗಾರರ ಮೇಲೆ ಆಕ್ರಮಣಕಾರಿಯಾಗಿ ವರ್ತಿಸುವುದು ಹೀಗೆ ಹಲವು ಗೊಂದಲಮಯ ವಾತಾವರಣವನ್ನು ಸೃಷ್ಟಿದ್ದರೂ, ಏನೂ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದ ಪ್ರಾಚಾರ್ಯರು ಇಂದು ಕಾಲೇಜಿನ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಲು ಅವಕಾಶ ಕೊಡಬಾರದು ಎಂದು ವಿದ್ಯಾರ್ಥಿಗಳ ಗುಂಪು ಧರಣಿ ನಡೆಸಿದಾಗ ಕಾಲೇಜಿಗೆ ಏಕಾಏಕಿ ರಜೆ ಸಾರಿದ್ದಾರೆ ಎನ್ನಲಾಗುತ್ತಿದ್ದು, ಪ್ರಾಚಾರ್ಯರ ಈ ನಡೆ ಸಂಶಯಕ್ಕೆ ಕಾರಣವಾಗಿದೆ.