ಪುತ್ತೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಇ.ಡಿ.ಯ ದಮನಕಾರಿ ನೀತಿಯನ್ನು ಖಂಡಿಸಿ ಪಿಎಫ್ಐ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಎ.ಸಿ ಕಛೇರಿ ಮುಂಭಾಗದ ಅಮರ್ ಜವಾನ್ ಸ್ಮಾರಕದ ಬಳಿ ಜೂ.೩ರಂದು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಿಎಫ್ಐ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬಿರ್ ಅರಿಯಡ್ಕರವರು ಇಡಿ ಸಂಸ್ಥೆಯು ಬಿಜೆಪಿಯ ಟೂಲ್ ಕಿಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಘ ಪರಿವಾರದ ವಿರುದ್ಧ ಧ್ವನಿ ಎತ್ತುವ ಕಾರಣಕ್ಕಾಗಿ ಇಂತಹ ದಾಳಿಗಳು ನಡೆಯುತ್ತಿದೆ ಎಂದರು.
ನಮ್ಮಿಂದ ಮುಟ್ಟುಗೋಲು ಹಾಕಿದ ಹಣವನ್ನು ಶೀಘ್ರದಲ್ಲಿಯೇ ಕಾನೂನು ಬದ್ಧವಾಗಿ ಮರಳಿ ಪಡೆಯಲಿದ್ದೇವೆ ಎಂದು ಅವರು ಹೇಳಿದರು. ಜಿಲ್ಲಾ ಸಮಿತಿ ಸದಸ್ಯ ರಿಯಾಝ್ ಮಾತನಾಡಿ, ಜನವಿರೋಧಿ ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆ ಇಡಿ ಎಂಬ ಅಸ್ತ್ರವನ್ನು ಬಳಸಿಕೊಂಡು ತಮ್ಮ ಧ್ವನಿಯನ್ನು ಅಡಗಿಸುವ ಕೆಲಸಮಾಡುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಸಿಟಿ ಡಿವಿಝನ್ ಅಧ್ಯಕ್ಷ ಉಮ್ಮರ್ ಕೂರ್ನಡ್ಕ, ಕಬಕ ಡಿವಿಝನ್ ಅಧ್ಯಕ್ಷ ಶಮೀರ್ ಮುರ, ಕುಂಬ್ರ ಡಿವಿಝನ್ ಅಧ್ಯಕ್ಷ ಶಾಕಿರ್ ಕಟ್ಟತ್ತಾರ್, ಎಸ್ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಮೊದಲಾದವರು ಉಪಸ್ಥಿತರಿದ್ದರು. ಇಕ್ಬಾಲ್ ಮುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.