ಪುತ್ತೂರು: ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಜೂ.3ರಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳಿಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಾಗನ ಕಟ್ಟೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಇತ್ತೀಚೆಗೆ ವಿವಾದ ಉಂಟಾಗಿದ್ದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ದೇವಸ್ಥಾನದ ಮಾಜಿ ಅಧ್ಯಕ್ಷರುಗಳ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಇತ್ತೀಚೆಗೆ ನಡೆದಿತ್ತು. ವ್ಯವಸ್ಥಾಪನಾ ಸಮಿತಿಯನ್ನು ವಜಾ ಮಾಡುವಂತೆ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿತ್ತು. ಬಳಿಕ ಮಾಣಿಲ ಮೋಹನದಾಸ ಸ್ವಾಮೀಜಿ ಸೇರಿದಂತೆ ಆನೇಕ ಮುಖಂಡರು ಆಗಮಿಸಿ ಪರಿಶೀಲನೆ ನಡೆಸಿದ್ದರು.. ಆ ಬಳಿಕದ ಬೆಳವಣಿಗೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ನಾಯ್ಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ನಂತರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಲೋಕಪ್ಪ ಗೌಡರವರು ಸುದ್ದಿಗೋಷ್ಠಿ ನಡೆಸಿ ವ್ಯಕ್ತವಾಗಿರುವ ಆರೋಪಗಳಿಗೆ ದಾಖಲೆಯನ್ನು ಪ್ರದರ್ಶಿಸಿ ಉತ್ತರ ನೀಡಿದ್ದರು. ದೇವಸ್ಥಾನಕ್ಕೆ ಸಂಬಂಧಪಟ್ಟು ಆರೋಪ ಪ್ರತ್ಯಾರೋಪ ವಾದ ವಿವಾದಗಳು ಮುಂದುವರಿದಿದ್ದು ಸದ್ಯ ಉಂಟಾಗಿರುವ ಸಮಸ್ಯೆಗಳೆಲ್ಲವೂ ಆದಷ್ಟು ಬೇಗ ಬಗೆಹರಿಯುವಂತಾಗಲಿ ಎಂದು ಭಕ್ತರು ಪ್ರಾರ್ಥಿಸುತ್ತಿದ್ದಾರೆ.