ವಿಟ್ಲ: ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈಯ್ಯಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಕೊಡಂಗೈ ನಿವಾಸಿ ದಾಮೋದರ ಶೆಟ್ಟಿಯವರ ಪುತ್ರ, ವಿಟ್ಲಪಡ್ನೂರು ಗ್ರಾಮ ಪಂಚಾಯತ್ನ ಉಪಾಧ್ಯಕ್ಷ ನಾಗೇಶ್ ಶೆಟ್ಟಿಯವರ ಮನೆಯಲ್ಲಿ ಈ ಕಳವು ಪ್ರಕರಣ ನಡೆದಿದೆ. ನಾಗೇಶ್ ರವರ ಪತ್ನಿ ಪ್ರೀತಿ ಶೆಟ್ಟಿ ಜೂ.೮ ರಂದು ಬಂಟ್ವಾಳದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳುವ ವೇಳೆ ಧರಿಸಿಕೊಂಡು ಹೋದ ಚಿನ್ನಾಭರಣವನ್ನು ಮರಳಿ ಬಂದು ಮನೆಯ ಕಪಾಟಿನಲ್ಲಿ ಇರಿಸಿದ್ದರು. ಮರುದಿನ ಬೆಳಗ್ಗೆ ಇನ್ನೊಂದು ಮದುವೆಗೆ ಹೋಗಲು ಹೊರಡುವಾಗ ಕಪಾಟಿನಲ್ಲಿರಿಸಿದ್ದ ಚಿನ್ನಾಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಒಟ್ಟು ೧,೨೮,೬೦೦ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾಗಿರುವುದಾಗಿ ನಾಗೇಶ್ ಶೆಟ್ಟಿಯವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.