ಪುತ್ತೂರು: ಸರ್ವೆ ಗ್ರಾಮ ವ್ಯಾಪ್ತಿಯ ರೆಂಜಲಾಡಿ, ಕಲ್ಪನೆ, ಸೊರಕೆ ಪ್ರದೇಶಕ್ಕೆ ಕೆಎಸ್ಆರ್ಟಿಸಿ ಬಸ್ ಸೌಕರ್ಯ ಕಲ್ಪಿಸುವ ವಿಚಾರಕ್ಕೆ ಸಂಬಂಧಪಟ್ಟು ಕೆಎಸ್ಆರ್ಟಿಸಿ ಪುತ್ತೂರು ಡಿಪೋದ ಅಧಿಕಾರಿಗಳು ಜೂ.೧೬ರಂದು ಸ್ಥಳಕ್ಕೆ ಭೇಟಿ ನೀಡಿ ರೂಟ್ ಪರಿಶೀಲನೆ ನಡೆಸಿದರು.
ಡಿಪೋ ಮ್ಯಾನೇಜರ್ ಇಸ್ಮಾಯಿಲ್ ಮತ್ತು ತಂಡ ಕೂಡುರಸ್ತೆ, ಕಲ್ಪಣೆ, ರೆಂಜಲಾಡಿ, ಸೊರಕೆ ಪ್ರದೇಶಗಳಲ್ಲಿ ರೂಟ್ ಚೆಕ್ ಮಾಡಿ ಸ್ಥಳೀಯ ಪ್ರಮುಖರಿಂದ ಮಾಹಿತಿ ಪಡೆದುಕೊಂಡರು.
ಮುಂಡೂರು ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯ, ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಕೆ, ಶಿಕ್ಷಕ ಸಹದೇವ್, ಪತ್ರಕರ್ತ ಯೂಸುಫ್ ರೆಂಜಲಾಡಿ ಮೊದಲಾದವರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಈ ಭಾಗಕ್ಕೆ ಶೀಘ್ರದಲ್ಲೇ ಬಸ್ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಡಿಪೋ ಮ್ಯಾನೇಜರ್ ಇಸ್ಮಾಯಿಲ್ ಭರವಸೆ ನೀಡಿದರು.
ಕೆಎಸ್ಆರ್ಟಿಸಿ ಸಂಚಾರ ನಿರೀಕ್ಷಕರಾದ ಅಪ್ಪಯ್ಯ, ಸಹಾಯಕ ಕಾರ್ಯ ಅಧೀಕ್ಷಕರಾದ ಜಯಂತ್, ಲೆಕ್ಕಪತ್ರ ಮೇಲ್ವಿಚಾರಕರಾದ ಪೂರ್ಣೇಶ್ ಉಪಸ್ಥಿತರಿದ್ದರು.
ಗ್ರಾಮಾಂತರ ಪ್ರದೇಶವಾಗಿರುವ ಸರ್ವೆ ಗ್ರಾಮ ವ್ಯಾಪ್ತಿಯಲ್ಲಿ ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳು ಸಂಕಷ್ಟ ಪಡುತ್ತಿರುವ ಬಗ್ಗೆ ಜೂ.೧೩ರಂದು ಸುದ್ದಿ ಪತ್ರಿಕೆ ವಿಶೇಷ ವರದಿ ಪ್ರಕಟಿಸಿತ್ತು. ಅಲ್ಲದೇ ಜೂ.೧೩ರಂದು ಪುತ್ತೂರಿನಲ್ಲಿ ಶಾಸಕರ ನೇತೃತ್ವದಲ್ಲಿ ನಡೆದ ಕೆಎಸ್ಆರ್ಟಿಸಿ ಜನ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರಾದ ಕರುಣಾಕರ ಗೌಡ ಎಲಿಯ, ರಾಧಾಕೃಷ್ಣ ರೈ ರೆಂಜಲಾಡಿ ಹಾಗೂ ಕೆ.ಎಂ ಹನೀಫ್ ರೆಂಜಲಾಡಿಯವರು ವಿಷಯ ಪ್ರಸ್ತಾಪಿಸಿ ಬಸ್ ಸೌಕರ್ಯ ಒದಗಿಸಿಕೊಡುವ ಬಗ್ಗೆ ಆಗ್ರಹಿಸಿದ್ದರು. ಶಾಸಕರೂ ಈ ಭಾಗಕ್ಕೆ ಇರುವ ಬಸ್ನ್ನು ಡೈವರ್ಟ್ ಮಾಡಿ ವ್ಯವಸ್ಥೆ ಮಾಡುವಂತೆ ಹೇಳಿದ್ದರು. ಇದೀಗ ಕೆಎಸ್ಆರ್ಟಿಸಿ ಅಧಿಕಾರಿಗಳ ತಂಡ ಆಗಮಿಸಿ ರೂಟ್ ಪರಿಶೀಲನೆ ನಡೆಸಿರುವ ಕಾರಣದಿಂದ ಈ ಭಾಗಕ್ಕೆ ಬಸ್ ಸೌಕರ್ಯ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು.
Home ಗ್ರಾಮವಾರು ಸುದ್ದಿ ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳ ಪರದಾಟ ಹಿನ್ನೆಲೆ; ಕೆಎಸ್ಆರ್ಟಿಸಿ ಅಧಿಕಾರಿಗಳಿಂದ ಸರ್ವೆ ಗ್ರಾಮ ವ್ಯಾಪ್ತಿಯಲ್ಲಿ ರೂಟ್ ಪರಿಶೀಲನೆ